Wednesday, July 13, 2016

|| ಚುಟುಕುಗಳು ||


ಇದುವೇ ನನ್ನ ಮೊಬೈಲು ,
ಇರಲಿ ಇಲ್ಲದಿರಲೀ ನೆಟ್ ವರ್ಕ್  ಸಿಗ್ನಲ್ಲು ,
ಇರಲಿ ಕಾಡು - ಮೇಡು, ಬಟಾ-ಬಯಲು,
ಜೊತೆಗೆ ಇರುವುದು ಇರುಳು ಹಗಲು
ಬೆಡ್ ರೂಮ್ ತಲೆ ದಿಂಬಲೂ, 
ಟಿವಿ, ಟೇಬಲ್ ಮೇಲೂ, 
ಸಿಗುವುದು ಎಲ್ಲಂದಲ್ಲೂ,
ಆನಂದ ಅದರಲ್ಲಿ ಬರುವ ಆಪ್, ಚಿತ್ರ, ಹಾಡು ಸಾಲು, 
ಸಮಯ ಸಂದರ್ಭ ಇಲ್ಲ ನೋಡಲು,
ಕೊಡುವೆ ಅದಕ್ಕೊಂದು ಸ್ಥಾನ ಮೀಸಲು,  
ಬಿಟ್ಟರೂ ಬಿಡದೆ ಕಾಡುವ ನನ್ನ ಮೊಬೈಲು.
======================================================
ಏನಾಗುವೆಯೋ ಪುಟ್ಟಾ
ಏನಾಗುವೆಯೋ ?
ಅಮ್ಮ ಹೇಳ್ತಾಳೆ ಆಗು ಇಂಜಿನಿಯರ್
ಅಪ್ಪ ಹೇಳ್ತ್ತಾನೆ ಆಗು ಡಾಕ್ಟರ್
ಅಕ್ಕ ಹೇಳುವಳು ಆಗು ಆಫೀಸರ್
ಏನಾಗುವೆಯೋ ಪುಟ್ಟಾ
ಏನಾಗುವೆಯೋ.... ?
=======================================================
ಆಸೆಗಳೆಂದರೆ ಹೀಗೆ 
ಹಕ್ಕಿಯ ಹಾಗೆ 
ಅದುಮಿಟ್ಟರೆ ಕುಟುಕುವುದು 
ತೆರೆದಿಟ್ಟರೆ ಹಾರುವುದು




Thursday, June 30, 2016

ಅಪ್ಪ..!!

ಅಂದು ತನ್ನ ಹೆಂಡತಿಯ ಬೈಗುಳದಿಂದ ಸಾಕಾಗಿದ್ದ ರಾಜೀವ. ಸದಾ ಗೊಣಗುತ್ತಿದ್ದ ತಂದೆಯನ್ನು ವೃದ್ಧಾಶ್ರಮಕೆ ಸೇರಿಸಲು ಅರ್ಜಿಯನ್ನು ತುಂಬಿಸುತ್ತಿದ್ದ. ಒಬ್ಬನೇ ಮಗ ನಾನು ಎಲ್ಲವೂ ಇದೆ ಹಣ, ಮನೆ, ಹೆಂಡತಿ, ಇಬ್ಬರು ಮಕ್ಕಳು, ತನ್ನ ಖಾಸಗಿತನಕ್ಕೆ ಅಡ್ಡಿಯಾಗಿರುವ ಅಪ್ಪ.
ಪ್ರತಿನಿತ್ಯ ಸುಧಾ ಅಪ್ಪನ ಬಗ್ಗೆ ಕೊಂಕು ಹೇಳುತ್ತಲೇ ಇದ್ದಳು.

"ಅವರು ಟಾಯ್ಲೆಟ್ ನಲ್ಲಿ ನೀರು ಹಾಕಿಲ್ಲ, ಬೆಡ್ ಮೇಲೆ ಉಚ್ಚೆ, ಚಪಾತಿ ಪಲ್ಯ ಅರ್ಧ ತಿಂದಿದ್ದಾರೆ, ಮಕ್ಕಳಿಗೆ ಓದೋದಿಕ್ಕೆ ಬಿಡದೆ ಅವರೊಂದಿಗೆ ಯಾವಾಗಲೂ ಆಟ. ಮನೆಗೆ ತನ್ನವರು ಬಂದಾಗ ಮಾತನಾಡಿಸೋಲ್ಲ, ಇಂಗ್ಲಿಷ್ ನ್ಯೂಸ್ ಪೇಪರ್ ತರೋಲ್ಲ, ಸದಾ ಅವರು ಹಾಕಿದ್ದ ಟಿ ವಿ ಚಾನೆಲ್ ನೋಡ್ಬೇಕು....." ಹೀಗೆ ಅಪ್ಪನ ವಿರುದ್ಧ ಇತರೆ ಅಪವಾದ ಪಟ್ಟಿಯನ್ನ ಒಪ್ಪಿಸುತ್ತಿದ್ದಳು.

ತನಗೂ ಅಷ್ಟೇ

ಏನಾದರೋ ಹೊಸ ವಸ್ತು ತಂದರೆ "ಯಾಕೋ ರಾಜೀವ ಇಷ್ಟು ಬೆಲೆ ಕೊಟ್ಟು ತಂದೆ?, ಮಾರ್ಕೆಟ್ ನಲ್ಲಿ ಇನ್ನು ಕಡಿಮೆ ಸಿಗೋದು, ಅವರು ಯಾರು?, ಇವತ್ತು ಯಾರ ಜೊತೆ  ಬಂದೆ, ಪೆನ್ಶನ್ ದುಡ್ಡು ತಗೊಂಡು ಬಾ, ಭಾನುವಾರ ವಾಕಿಂಗ್ ಕರ್ಕೊಂಡು ಹೋಗು, ಹೊಸ ಮೊಬೈಲ್ ಕೊಡಿಸು, ಮನೇಲಿ ಒಬ್ಬನೇ ಇರೋಕೆ ಆಗಲ್ಲ ಕೇಬಲ್ ಹಾಕಿಸು, ಶನಿವಾರ ಕಬ್ಬನ್ ಪಾರ್ಕು, ಲಾಲ್ ಬಾಗ್ ಸುತ್ತಿಸು.. ಅಬ್ಬಾ ಇಷ್ಟು ವಯಸ್ಸಾದ್ರೂ ಆಸೆ ಹೋಗಿಲ್ವಾ ಅಪ್ಪನಿಗೆ. ಅಮ್ಮ ಇದ್ದಿದ್ರೆ ಇನ್ನೆಷ್ಟು ಕಾಟ ಕೊಡ್ತಾ ಇದ್ದನೋ ಅಪ್ಪ.  ಮುವ್ವತ್ತು ವರ್ಷದಿಂದ ಅಮ್ಮನ ನೋಡಿದ ನೆನಪೇ ನನಗೆ ಇಲ್ಲ." ಎಂದುಕೊಳ್ಳುತ್ತ ವೃದ್ಧಾಶ್ರಮದ ಅರ್ಜಿಯನ್ನು ತುಂಬಿಸಿ ಕೊಟ್ಟು, ಅಪ್ಪ ಉಪಯೋಗಿಸುತ್ತಿದ್ದ ಬಟ್ಟೆ, ವಸ್ತುವನ್ನೆಲ್ಲ ಟ್ರಂಕ್ ನಲ್ಲಿ ಹಾಕಿಟ್ಟು  ಅಲ್ಲಿದ್ದ ಮ್ಯಾನೇಜರ್ ಕೊಟ್ಟ.

"ಹಬ್ಬ, ಹರಿದಿನ ಇದ್ದಾಗ ಬಂದು ಕರಕೊಂಡು ಹೋಗ್ತಿರೋ?"ಎಂದ ಮ್ಯಾನೇಜರ್.

"ಹಬ್ಬಗಳಿಗೆ ಏನೂ ಕರಕೊಂಡು ಬರೋದು ಬೇಡ, ಮಾಡಿರೋದನ್ನೇ ಕೊಟ್ಟು ಬನ್ನಿ" ಎಂದ ಸುಧಾಳ ಮಾತು ಕಿವಿಯಲ್ಲೇ ರಿಂಗಣಿಸಿತು.

"ಹಾ, ಆ ಸರ್, ಬರ್ತೀನಿ ನೋಡೋಣ " ಎಂದುತ್ತರಿಸಿದ ರಾಜೀವ.

"ಏನ್ ಜನಗಳೋ ಏನೋ" ಎಂದು ಅಂದುಕೊಳ್ಳುತ್ತ ಮ್ಯಾನೇಜರ್, ಅಪ್ಪನ ಟ್ರಂಕ್ ತೆಗೆದುಕೊಂಡು,
ಅಪ್ಪ ಕುಳಿತಲ್ಲಿಗೆ ಬಂದು "ಬನ್ನಿ ಸಾಮಿ, ನಿಮ್ಮ ಜಾಗಕೆ ಹೋಗೋಣ " ಎಂದು ಅಪ್ಪನನ್ನ ಎಬ್ಬಿಸಿಕೊಂಡು ಹೊರಟು ಹೋದ. ಅಪ್ಪ ಹಿಂತಿರುಗಿ  ರಾಜೀವನನ್ನು ನೋಡಲೇ ಇಲ್ಲ.

"ಎಷ್ಟು ಅಹಂ  ಅಪ್ಪನಿಗೆ. ತಿರುಗಿ ನೋಡಲಿಲ್ಲವಲ್ಲ, ಇರೋ ಒಬ್ಬ ಮಗ ಅನ್ನೋ ಮಮಕಾರ ಇಲ್ಲವಲ್ಲ, ಏನೋ  ನಾವಾಗಿದ್ದಕ್ಕೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದೀನಿ, ಬೇರೆ ಯಾರಾದ್ರೂ ಆಗಿದ್ರೆ ಬೀದಿ ಭಿಕಾರಿ ಮಾಡ್ತಾ ಇದ್ರು.. ತೊಂದರೆ ತಪ್ಪಿತು" ಎಂದು ಮನಸಲ್ಲೇ ಅಂದುಕೊಳ್ಳುತ್ತ ಮನೆ ಕಡೆ ಹೆಜ್ಜೆ ಹಾಕಿದ.

ಮೂರು-ನಾಲ್ಕು ದಿನಗಳ ನಂತರ ಅದೇ ವೃದ್ಧಾಶ್ರಮದಿಂದ "ಈ ವರ್ಷದಿಂದ ಆಶ್ರಮದ ಶುಲ್ಕ ಎರಡು ಸಾವಿರ ಜಾಸ್ತಿಯಾಗಿದೆ, ಬಂದು ಕಟ್ಟಿ ಹೋಗಿ" ಅಂತ  ರಾಜೀವನಿಗೆ ಕರೆ ಬಂದಿತು.

"ಓ! ಇದು ಬೇರೆ, ಇಂದು ಸಂಜೆನೇ ಬಂದು ಕಟ್ಟುತ್ತೀನಿ ಸರ್" ಎಂದು ಹೇಳಿ ಸಂಜೆ ವೃದ್ಧಾಶ್ರಮಕ್ಕೆ ಹೊರಟ.

ಹಣ ಕಟ್ಟಿ ಅಪ್ಪ ಎಲ್ಲಿದ್ದಾನೋ ನೋಡಿ ಬರುವ ಒಮ್ಮೆ ಅಲ್ಲಿನ ಅಂಗಳಕ್ಕೆ ಬರುವಾಗಲೇ ಅಲ್ಲಿನ ಸಿಬ್ಬಂದಿ ವರ್ಗದ ಜೊತೆ ಅನ್ನೋನ್ಯವಾಗಿ ಅಪ್ಪ ಅವರ ಹೆಗಲ ಮೇಲೆ ಕೈ ಹಾಕಿ, ಕುಲು ಕುಲು ಎಂದು ನಗಾಡುತ್ತಾ ಮಾತನಾಡುತ್ತಿರುವುದು ಕಂಡಿತು ರಾಜೀವನಿಗೆ. ಅವನಿಗೆ ಆಶ್ಚರ್ಯವಾಗಿತ್ತು. 'ಎಲ್ಲರೂ ವೃದ್ಧಾಶ್ರಮ ಎಂದರೆ ಜೈಲ್ನಲ್ಲಿ ಇರುವಂತೆ ಅನ್ನುತ್ತಿದ್ದರೂ ಅಪ್ಪ ಹೀಗೆ ಖುಷಿಯಾಗಿ ಇದ್ದಾರಲ್ಲ ಹೇಗೆ?'  ಎಂದು ಯೋಚಿಸಿ ಅಲ್ಲಿ ಇದ್ದ ವೃದ್ಧಾಶ್ರಮದ ಸಿಬ್ಬಂದಿ ವರ್ಗದ ಕೊಠಡಿ ಹೋಗಿ ಅಲ್ಲಿದ್ದ ವ್ಯಕ್ತಿಯನ್ನು ಕರೆದು,
"ಅಲ್ಲಿದ್ದಾರಲ್ಲ ಆ ವ್ಯಕ್ತಿ , ಇಲ್ಲಿನ ಜನಗಳಿಗೆ ಎಷ್ಟು ವರ್ಷದಿಂದ ಗೊತ್ತು? ಅಷ್ಟೊಂದು ಅನ್ನೋನ್ಯವಾಗಿ ಮಾತಾಡುತ್ತಿದ್ದಾರಲ್ಲ?" ಎಂದು ಕೇಳಿದ.

"ಯಾರು ಸಾರ್, ಆ ನೀಲಿ ಶರ್ಟ್ ಹಾಕಿದ್ದರಲ್ಲ ಅವರಾ ? ಸುಮಾರು ವರ್ಷದಿಂದ ಗೊತ್ತು ಸಾರ್ ಅವರು ಸುಮಾರು ಮೂವತ್ತು ವರ್ಷದ ಹಿಂದೆ ನಮ್ಮದೇ ಅನಾಥಾಶ್ರಮದಿಂದ ಒಂದು ಅನಾಥ ಗಂಡು ಮಗುನ  ದತ್ತು ತಗೊಂಡು ಹೋಗಿದ್ರು ಸಾರ್, ಅವಾಗಿಂದ ಪರಿಚಯ ಸಾರ್. ಪ್ರತಿವರ್ಷ ಆ ಮಗು ಹುಟ್ಟು ಹಬ್ಬಕ್ಕೆಇಲ್ಲಿ  ಬಂದು ಸಿಹಿ ಹಂಚ್ತಾರೆ.. ಅಂದ ಹಾಗೆ ತಾವು ಯಾರು ಸಾರ್..? " ಎಂದು ಆ ವ್ಯಕ್ತಿ ರಾಜೀವನನ್ನ ಕೇಳಿದ.

---
ಇದು ಮುಂಬಯಿ ಆಕಾಶವಾಣಿ, ವಿವಿಧ ಭಾರತಿ ಯಲ್ಲಿ ಕೇಳಿದ ಒಂದು ಪೋಸ್ಟ್ ಕಾರ್ಡ್ ಕಥೆಯ ಎಳೆಯನ್ನು ವಿಸ್ತರಿಸಿ ಬರೆದದ್ದು.

Tuesday, November 6, 2012

ನಗುವ ನಯನ - Nikon D5100 Camera snaps

Ramadan Lamp at Radisson Blu Hotel, Cairo, Egypt
Add caption
Add caption
ನಕ್ಷತ್ರ 



ಭಾರತೀಯ-ಸಾಂಪ್ರದಾಯಿಕ-ಉಡುಗೆ- ಸೀರೆ : ಸೆರಗು, ಅಂಚು 
Soujanya: Nalina DJ 










Sunday, October 14, 2012

ತಪ್ಪಿ ಹೋಯಿತಲ್ಲೇ ಚುಕ್ಕಿ

ಕವಿ:  ಬಿ. ಆರ್. ಲಕ್ಷ್ಮಣ್ ರಾವ್ 

------------------

ಕವಿ:  ದೇ. ಸಿ ಕುಲಕರ್ಣಿ 
===============
ಕವಿ: ಜಿ. ಎಸ್. ಎಸ್

Saturday, January 7, 2012

ಏಕ್ ಚಾದರ್ ಮೈಲೀ ಸೀ

ಏಕ್ ಚಾದರ್ ಮೈಲೀ ಸೀ
" ಮೇಡಂ ! ನಿಮ್ಮನ್ನ ನೋಡೋಕೆ ಯಾರೋ ಬಂದಿದ್ದಾರೆ" ಅಂತ ಮಂಜು ಬಂದು ಹೇಳಿದಾಗ ಬೆಚ್ಚಿ ಬಿದ್ದವಳಂತೆ ನಾಜಿಯ
"ಯಾರಂತೆ ?" ಅಂತ ಪ್ರಶ್ನೆ ಹಾಕಿದಳು. "ಗೊತ್ತಿಲ್ಲ ಮೇಡಂ, ವಿಸಿಟಿಂಗ್ ರೂಂ ನಲ್ಲಿ ಕುಳಿತಿದ್ದಾರೆ. ಚಂದ್ರಕಲಾ ಮೇಡಂ ನಿಮಗೆ ಬರೋದಿಕ್ಕೆ ಹೇಳಿದ್ದಾರೆ " ಅಂತ ಹೇಳಿ ಹೊರಟು ಹೋದ.
ಕ್ಲಾಸ್ ನಲ್ಲಿ ಮಕ್ಕಳಿಗೆ ಸುಮ್ಮನೆ ಇರುವುದಕ್ಕೆ ಹೇಳಿ ವಿಸಿಟಿಂಗ್ ರೂಂನತ್ತ  ಹೊರಟಳು. ಯಾರಿರಬಹುದು.. ಮೀರಾ, ಶಾರದಾ, ಸುಲ್ತಾನ .? ಎಂದು ಮನಸಲ್ಲೇ ಆತಂಕದಿಂದ  ವಿಸಿಟಿಂಗ್ ರೂಂನ ಬಾಗಿಲು ತಳ್ಳಿದಳು. ಕಿರ್ರ್ ಎಂದು ಬಾಗಿಲು ತಳ್ಳಿದ ಶಬ್ದಕ್ಕೆ ಅಲ್ಲಿ ಕುಳಿತಿದ್ದ ಪುರುಷ ವ್ಯಕ್ತಿ ಹಿಂತಿರುಗಿ ನೋಡಿದಾಗ ನಾಜಿಯಗೆ ಕೈ ಕಾಲುಗಳು ನಡುಗಿದವು. ಕಣ್ಣಲ್ಲಿ ನೀರು ತಾನಾಗೆ ತುಂಬಿ ಬಂತು. "ಆಪ್.. ಯಹಾ? " ಎಂದು ಅದರುವ ದನಿಯಲ್ಲಿ ಕೇಳಿದಳು.
"ಹಾ! ಬೇಗಂ ನಿನ್ನ ನೋಡಬೇಕು ಅಂತ ಅನಿಸ್ತು ಬಂದೆ." ಎಂದದ್ದು ನಾಜಿಯಳ ಪತಿ ಶಹಾಬುದ್ದೀನ್.
"ಯಾಕೆ ಅಲ್ಲೇ ನಿಂತುಬಿಟ್ಟೆ? ಬಾ ಬೇಗಂ ಇಲ್ಲಿ ಕೂತ್ಕೋ" ಅಂತ  ಆತನೇ ನಾಜಿಯಳನ್ನು ಕರೆದ. ಮೆಲ್ಲಗೆ ಅಡಿಯಿಡುತ್ತಾ ಸಮೀಪದಲ್ಲೇ ಇದ್ದ ಕುರ್ಚಿಯೊಂದರಲ್ಲಿ ಕುಳಿತು ಕೊಂಡು ಕಣ್ಣೀರು ಒರೆಸಿಕೊಂಡಳು.
"ಹೇಗಿದ್ದೀಯ ನಾಜಿಯ?" ಎಂದ.
"ಚೆನ್ನಾಗಿದ್ದೀನಿ" ಎಂದಳು ನಾಜಿಯ.
"ಎಷ್ಟು ದಿನ ಆಯ್ತು ನಿನ್ನ ನೋಡಿ? " ಎಂದ ಶಹಬ್
ದಿನಗಳಲ್ಲ, ತಿಂಗಳುಗಳಲ್ಲ ವರ್ಷಗಳೇ ಕಳೆದು ಹೋಗಿವೆ ಎಂದು ಹೇಳಬೇಕೆನಿಸಿತು ನಾಜಿಯಳಿಗೆ,
"ಸುಮಾರು ದಿನ ಆಯ್ತು. ನೀವು ಹೇಗಿದ್ದೀರಿ? ನಿಖಾ ಆಯ್ತಾ?" ಎಂದಳು.
"ಹೋಗಯ ಬೇಗಂ, 3 ವರ್ಷ ಆಯ್ತು. ಬೇಟಿಯು ಇದ್ದಾಳೆ " ಎಂದ.
"ಸರಿ" ಎಂದು ಹೇಳುವಾಗಲೇ ಮಂಜು ಎರಡು ಟೀ ಕಪ್ ತಂದಿಟ್ಟು ಹೋದ.
ಟೀ ಅನ್ನು ಶಹಬ್ ನೀಡುತ್ತ "ಅಮ್ಮಿ, ಅಬ್ಬಜಾನ್, ಮುನ್ನಿ ಹೇಗಿದ್ದಾರೆ?" ಎಂದು ಕೇಳಿದಳು.
"ಎಲ್ಲರು ಚೆನ್ನಾಗಿದ್ದಾರೆ. ನೀನು ಇಲ್ಲಿಗೆ ಬಂದು ಎಷ್ಟು ದಿನ ಆಯ್ತು. ನನಗೆ ನಿನ್ನೆಯೇ ಗೊತ್ತಾಗಿದ್ದು  ಅದೂ ಗೋಕುಲಂ ನಲ್ಲಿ ನಿನ್ನ ಸಹೇಲಿ ಮೀರಾ ಸಿಕ್ಕಿ ಹೇಳಿದಳು" ಎಂದ.
ಓರೆಗಣ್ಣಿನಿಂದ ಅವನ್ನು ನೋಡುತ್ತಾ, "ಸುಮಾರು ದಿನ ಆಯ್ತು ಶಹಬ್ "
"ಹಾಗಿದ್ರೆ ಇಷ್ಟು ದಿನ ? "
"ನನಗೆ ಕ್ಲಾಸ್ ಗೆ ತಡ ಆಗುತ್ತೆ. ಮಕ್ಕಳು ಗಲಾಟೆ ಮಾಡ್ತಾ ಇರುತ್ತವೆ" ಎಂದು ಅವನ  ಮಾತನ್ನು ಅಲ್ಲೇ ತುಂಡರಿಸುವಂತೆ  ಹೇಳಿ ಎದ್ದು ನಿಂತಳು ನಾಜಿಯ.
"ಸರಿ ಬೇಗಂ, ನಾಳೆ ಸಂಜೆ ಭೇಟಿ ಆಗುವಾ. ಖುದಾ ಆಫಿಜ್ " ಎಂದು ಹೇಳಿ ಹೊರಟು ಹೋದ.
ಇತ್ತ ನಾಜಿಯ ದ್ವಂಧ್ವ ಮನಸಿಲ್ಲಿಯೇ ತನ್ನ ತರಗತಿಯನ್ನು ಅಂದು ಮುಗಿಸಿ ಆ ಶಾಲೆಯ ಹಿಂಬದಿಯಲ್ಲಿ ಇದ್ದ ತನ್ನ ಹಾಸ್ಟೆಲ್ ಗೆ ಹಿಂತಿರುಗಿದಳು. ಸಂಜೆ ಮೀರಾಗೆ ಫೋನ್ ಮಾಡಲು ಯತ್ನಿಸಿದಳು ಆದರೆ ಆಕೆ ಸಿಗಲಿಲ್ಲ.
ಊಟ ಮಾಡಲು ಮನಸಿಲ್ಲದೇ ಜೂಸ್ ಕುಡಿದು ತನ್ನ ರೂಂ ನಲ್ಲಿ ಓದಲೆತ್ನಿಸಿದಳು. ಆದರೆ ಆಕೆಗೆ ಶಹಾಬುದ್ದೀನ್ ಕಣ್ಣು ಮುಂದೆ ಬರುತ್ತಿದ್ದ. ಹಾಗೆಯೇ 6 ವರ್ಷ ಹಿಂದಿನ ದಿನಗಳು ನೆನಪಾದವು. ದುಃಖ ಉಮ್ಮಳಿಸಿ ಬಂತು. ತನ್ನ ಅಬ್ಬ, ಅಮ್ಮಿ ಎಲ್ಲರನ್ನು ನೆನಸಿಕೊಂಡಳು.
 - - - -

ಅಂದಿನ ಕಾಲೇಜು ದಿನಗಳಲ್ಲಿ ಹೃದಯ ಕದ್ದವನು ಸಹಪಾಟಿ ರಫೀಕ್. ನೋಡಲು ಎಷ್ಟು ಚೆಂದವೋ ಅಷ್ಟೇ ಅವನ ಮಾತು, ಓದು, ಇನ್ನಿತರ ಕಾಲೇಜು ಸಂಭ್ರಮಗಳಲ್ಲಿ ಅವನದೇ ಕಾರುಬಾರು. ಅವನ ಹಿಂದೆ ಹಲವು ಹುಡುಗ ಹುಡುಗಿಯರ ಹಿಂಡು. ಆದರೆ ಅವನ ಕಣ್ಣು ನಾಜಿಯ ಮೇಲೆ.
ನಾಜಿಯ ಸುಸ್ವರ ಕಂಠದ ಗಾಯಕಿ. ಅವಳ ಘಜಲ್ ಗಳಿಗೆ ಮಾರುಹೊದವರೇ ಇಲ್ಲ. ತರಗತಿಯ ಬಿಡುವಿನ ವೇಳೆಯಲ್ಲಿ, ಕ್ಯಾಂಟೀನ್ ನಲ್ಲಿ, ಕಾಲೇಜು ಬಸ್ ನಲ್ಲಿ, ಟೂರ್ ಹೋದರೆ ಅಲ್ಲಿ, ಅವಳ ಪ್ರೇಮ ಕಾವ್ಯ ಕೇಳಿ ಖುಷಿ ಪಟ್ಟವರು, ವಿರಹದ ಘಜಲ್ ಕೇಳಿ ಅತ್ತವರು ಎಷ್ಟು ವಿದ್ಯಾರ್ಥಿಗಳೋ.
ನಾಜಿಯ ತಂದೆಯಂತೂ ಅವಳ ಭಕ್ತಿ ಗೀತೆ ಕೇಳದೆ ಬೆಳಿಗಿನ ಚಹಾ ಕುಡಿಯುತ್ತಿರಲಿಲ್ಲ. ಆಕೆ ಮಲಗಿದ್ದರೂ ಎಬ್ಬಿಸಿ
" ಬೇಟಿ, ಏಕ ಖುದ ಕ ಘಜಲ್  ಸುನಾವೋ " ಎಂದು ಕೇಳುವರು.
" ಅಬ್ಬ ಮೀರಾ ಕ ಗೀತ್ ? "
"ಖುದಾ ಏಕ್  ಹೈ, ಕೊಯಿ ಭೀ ಸುನಾವೋ" ಎಂದು ಚಹಾ ಹಿಡಿದು ಅವಳ ಮುಂದೆ ಕುಳಿತುಕೊಳ್ಳುವರು.
"ಮೀರಾ ಕೆ ಪ್ರಭು ಗಿರಿಧರ್ ನಾಗರ್ ಚರಣ್ ಕಮಲ್ ಕಿ ದಾಸಿ ರೇ ..." ಎಂದು ರಾಗ ಎತ್ತಿದರೆ ಸಾಕು ಮನೆಯಲ್ಲಿ ಸ್ವಯಂ ಮೀರಾ ನೆ ಹಾಡುತ್ತಿದ್ದಳೆನೋ ಎನ್ನುವಂತೆ ಇತ್ತು. ಪ್ರತಿದಿನ ಬೆಳಿಗ್ಗೆ ಇದೆ ಅಭ್ಯಾಸವಾಗಿತ್ತು.

"ನಾಜಿಯ ಇವತ್ತು ನಿನ್ನ ಮೀರಾ ಭಜನ್ ನನ್ನ ಮನೆಯವರೆಗೂ ಕೇಳುತಿತ್ತು. ವಾಹ್ !! ಸುಭಾನ್ ಅಲ್ಲಾ !" ಎಂದು ರಫೀ ಕಾಲೇಜ್  ನಲ್ಲಿ ಹೇಳಿದಾಗ ನಾಜಿಯ ಮನಸಲ್ಲಿ ಏನೋ ಪುಳಕ.
ಆದರೆ ಕಾಲೇಜಿನಲ್ಲಿ ಎಲ್ಲರಿಗೂ ಬರಿಯ ನಾಜಿಯಳ ಪ್ರೇಮಗೀತೆಗಳೇ ಬೇಕಾಗಿತ್ತು . ಅಂದಿನ ದಿನಗಳೇ ಅಂತವು. ಯೌವ್ವನದ ಉತ್ಸಾಹದ ದಿನಗಳು. ಕಣ್ಣಲ್ಲೇ ಸಂಭಾಷಿಸುವ ದಿನಗಳು.
ನಾಜಿಯ,  ರಫೀಕರ ಸ್ನೇಹ ಪ್ರೇಮವಾಗಿ ಅರಳಿತ್ತು. ಅದಕ್ಕೆ ಸಹಾಯವಾಗಿ ನಿಂತವನು ಶಬುದ್ದೀನ್, ನಾಜಿಯಳ ಸಂಬಂಧಿ. ಎಲ್ಲವೂ  ಸುಂದರ ಲೋಕ ಆ ದಿನಗಳು.. ಪ್ರತಿದಿನ ರಫೀ ಯನ್ನು ನೋಡದೆ, ಮಾತಾಡಿಸದೇ ಇರಲು ಆಗುತ್ತಿರಲಿಲ್ಲ ನಾಜಿಯಗೆ.
ಅದರ ಕುರುಹು ಕಾಲೇಜ್ ನಲ್ಲಿ ಆಕೆಯ ಪ್ರೇಮಗೀತೆಯಿಂದ ಕಾಣುತಿತ್ತು.
ಇತ್ತೀಚಿಗೆ ನಾಜಿಯ ಸಂಜೆ ಮನೆಗೆ ಬರುವುದು ತಡವಾದಗೆಲ್ಲ ಅವಳ ಅಮ್ಮಿ,
"ಎಲ್ಲಿಗೆ ಹೋಗಿದ್ದೆ, ಇಷ್ಟು ಹೊತ್ತು ಏನಾದ್ರೂ ಮಾಡ್ಕೊಂಡು ಬಂದ್ರೆ ನಿನ್ನ ಸಾಯಿಸಿ ಬಿಡ್ತೀನಿ" ಎಂದು ಎಚ್ಚರ ಕೊಡ್ತಿದ್ದರು.
ಅದಕ್ಕೆ ಅವಳ ತಂದೆ " ಚೋಡೋ  ಜೀ, ಬೇಟಿ ದೊಡ್ಡವಳು ಆಗಿದ್ದಾಳೆ. ಅವಳಿಗೂ ಗೊತ್ತು ಏನು ಬೇಕು ಏನು ಬೇಡ ಅಂತ" ಎಂದು ಮಗಳನ್ನು ಸಂಭಾಳಿಸುತ್ತಿದ್ದರು.
- - - -
ಹೀಗೆ ಒಮ್ಮೆ ನಾಜಿಯ ಕಾಲೇಜು ಸಹಪಾಟಿ ಉಮ್ರಾವ್ ಳ  ಮದುವೆಗೆ ಮೈಸೂರಿಗೆ ಹೋಗಬೇಕಾಗಿ ಬಂತು. ಎರಡು ದಿನ ಅವಳ ತರಗತಿಯ ಸ್ನೇಹಿತ-ಸ್ನೇಹಿತೆಯರೆಲ್ಲ ಒಟ್ಟಾಗಿ ಹೋಗುವ ಎಂದು ಹೊರಟರು.
ನಾಜಿಯ ಬರಲು ಹಿಂದೇಟು ಹಾಕಿದಾಗ
" ನನಗಾಗಿ ಆದರು ಬರಬೇಕು. ಇಲ್ಲವಾದಲ್ಲಿ ನಮ್ಮ ಸ್ನೇಹ ಇಲ್ಲಿಗೆ ನಿಲ್ಲುತ್ತೆ." ಎಂದ ರಫೀಕ್.
"ಅಲ್ಲಾಹ್ ! ಹಾಗೆಲ್ಲ ಅನ್ನಬೇಡಿ ರಫೀ. ಮನೆಯಲ್ಲಿ 'ಅಬ್ಬ' ಇಲ್ಲ, ಭಾಯಿ  ಭಿ ಇಲ್ಲ. ಅಮ್ಮಿ, ಪರ್ವೀನ್ ಇಬ್ಬರೇ ಇದ್ದಾರೆ. ಬರೋದಿಕ್ಕೆ ಆಗೋಲ್ಲ"
"ಪ್ಲೀಸ್!! ನಾಜು, ನಾವಿಬ್ಬರು ಅಲ್ಲಿ ಏಕಾಂತದಲ್ಲಿ ಸುಂದರ ಪರಿಸರದಲ್ಲಿ ನಮ್ಮ ಭಾವನೆಗಳನ್ನ ಹಂಚಿಕೊಳ್ಳಬಹುದು. ಬಾ, ಬರಲೇ ಬೇಕು. ಇಲ್ಲಾ, ನಾನೇ ಬಂದು ಅಮ್ಮಿಯನ್ನ ಒಪ್ಪಿಸಲಾ?" ಎಂದ ರಫೀಕ್.
"ಬೇಡ, ರಫೀ, ಈಗಲೇ ಅಮ್ಮಿಜಾನ್ ನನ್ನ ಬಗ್ಗೆ ಸಂದೇಹ ಪಟ್ಟಿದ್ದಾರೆ. ನೀ ಬಂದರೆ ಅಂತು ಅದು ಗಟ್ಟಿಯಾಗುತ್ತೆ . "
"ಸರಿ, ನಿನ್ನ ಸಹೇಲಿ  ಮೀರಾಳ ಸಹಾಯ ತಗೋ. ನನಗಾಗಿ ನೀನು ಬರಲೇ ಬೇಕು. ಹೇಳಿದ್ದು ನೆನಪಿದೆಯಲ್ಲಾ?" ಎಂದ. 
"ಸರಿ" ಎಂದು ಮೀರಾಳನ್ನು ಮನೆಗೆ ಕರಕೊಂಡು ಹೋದಳು. ಅದು ಯಶಸ್ಸು ಆಯಿತು. ಉಮ್ರಾವ್ ಮದುವೆಗೆ ಸುಮಾರು 7-8 ಜನ ಹೋದರು.
ಉಮ್ರಾವ್ ಮನೆಯಂತೂ ತುಂಬ ದೊಡ್ಡಮನೆ. ಮದುವೆಯ ಸಂಭ್ರಮ, ಮೆಹಂದಿ, ಧೋಲಕ್ ಗೀತೆ ಯೊಂದಿಗೆ, ನಾಜಿಯಳ ಘಜಲ್ ಗಳು ಅಲ್ಲಿಗೆ ಬಂದವರ ಮನ ಸೂರೆಗೊಂಡವು. ಮದುವೆಯ ದಿನ ಏನೇನೋ ಸಂಪ್ರದಾಯಗಳು ನಾಜಿಯಗೆ ಹೊಸದೆನಿಸಿತು.
ಮದುವೆಗೆ ಗಂಡು-ಹೆಣ್ಣು "ಕುಬೂಲ್ ಹೈ " ಎಂದು ಹೇಳಿದಾಗ ಅಲ್ಲಿನ ಸಂಭ್ರಮ ನಾಜಿಯ ಮನಸಿಗೆ ತಟ್ಟಿತು.
ಅದರಂತೆ ಆ ಸಂಜೆ
"ನೀನು ನಮ್ಮ ಮನೆಗೆ ಬಂದು ನೀ ಹೀಗೆ ಬಂದು ಕೇಳಬೇಕು ರಫೀ " ಎಂದಳು ನಾಜಿಯ.
"ಅಬ್ಭೀ, ಬಾರಲೇನು? ನಾನಂತೂ ಸಿದ್ಧ. ನೀನೆ ಇನ್ನು ಕೆಲಸ ಸೇರ ಬೇಕು ಅದು ಇದು ಅಂತ ಕಾಲ ತಳ್ಳುತ್ತಾ  ಇರೋದು." ಎಂದು ಕೀಟಲೆ ಮಾಡಿದ ರಫೀ.
"ಹಾಗಲ್ಲ ರಫೀ, ಅಬ್ಬಜಾನ್ ಗೆ ಮೈ ಹುಷಾರಿಲ್ಲ. ಸ್ವಲ್ಪ ದಿನ ಆಪರೇಷನ್ ಮುಗಿದರೆ ಸರಿ ಹೋಗುತ್ತೆ"
"ಅಲ್ಲಿವರೆಗೂ ಕಾಯಬೇಕ?"
"ಹಾ ಜೀ" ಎಂದು ನಕ್ಕಳು.

ಸಂಜೆ ಎಲ್ಲರು ತಮ್ಮ ಮನೆಗಳಿಗೆ ಹಿಂದಿರುಗಲು ಸಿದ್ಧತೆ ಮಾಡಿದರು. ಇತ್ತ ರಫೀಕ್ ನಾಜಿಯಳನ್ನು ಕರಕೊಂಡು ಮೈಸೂರ ಹೊರಗಿನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ರಾತ್ರಿ ಊಟದ ಏರ್ಪಾಡು ಮಾಡಿದ್ದ. ಅಲ್ಲಿಗೆ ವಿಶೇಷ ಅತಿಥಿಗಳಾಗಿ ರಾಜಕಾರಣಿಗಳು ಬಂದಿದ್ದರಿಂದ ರಾತ್ರಿಯ ಊಟದ ವ್ಯವಸ್ಥೆ ತುಂಬಾ ತಡವಾಯಿತು.
"ರಫೀ, ತಡ ಆಯಿತು, ಹೋಗೋಣವೆ. ಊಟ ಏನು ಬೇಡ ಉಮ್ರಾವ್ ಮನೆಯಲ್ಲಿ ರೋಟಿ ಮಾಡಿಸಿ ತಿಂದರಾಯ್ತು" ಎನ್ನಲು ನಾಜಿಯ,
"ಸ್ವಲ್ಪ ವೇಳೆ ನಾಜು, ಮುಗಿಯುತ್ತೆ ಅಂತ ಹೇಳಿದ್ದರಲ್ಲಾ" ಎಂದ ರಫೀಕ್.
ಊಟಕ್ಕೆ ಕಾಯುತ್ತಲೇ ಇದ್ದರು, ಸುಮಾರು 11 ಗಂಟೆಗೆ ಅತಿಥಿಗಳ ಕಾರ್ಯಕ್ರಮ ಮುಗಿಯಿತು.
ಅಲ್ಲಿನ  ವ್ಯವಸ್ಥಾಪಕ " ಕ್ಷಮಿಸಿ, ತಡವಾಗಿದ್ದಕ್ಕೆ" ಎಂದು ಅವರ ಹಾಗು ಅಲ್ಲಿಗೆ ಆಗಮಿಸಿದ ಇನ್ನಿತರ ಜನರಿಗೆ ಊಟದ ವ್ಯವಸ್ಥೆ ಮಾಡಿಸಿದರು.
ಹಲವು ಜನ ಅಲ್ಲಿನ ವ್ಯವಸ್ಥೆಯನ್ನು ಬೈದುಕೊಂಡು ಹಾಗೆ ಹೊರಟು ಹೋದರು. ಕೆಲವರು ದೂರದ ಊರಿಂದ ಬಂದಿದ್ದರಿಂದ  ವಿಧಿಯಿಲ್ಲದೆ ಅಲ್ಲೇ ಊಟ ಮುಗಿಸಿದರು ಹಾಗೆ ತಮ್ಮ ಹಾದಿ ಹಿಡಿದರು.
ನಾಜಿಯ, ರಫೀಕ್ ತಮ್ಮ ಊರಿಗೆ ಹೊರಡಲಾಗದೆ ಅಲ್ಲೇ ಉಳಿದುಕೊಂಡರು.
ನಾಜಿಯ ಬೇಡವೆಂದರೂ , "ಹೇಗೂ, ನಮ್ಮ ನಿಕಾಃ  ಖಂಡಿತ, ಒಂದಾಗೋಣ" ಎಂದ ರಫೀಕ್.
ಅಲ್ಲೇ ಅವರು ತಮ್ಮ ಮೈ ಮನ ಹಂಚಿಕೊಂಡರು.
ಬೆಳಿಗ್ಗೆ "ಕ್ಷಮಿಸು ನಾಜಿಯ, ತಪ್ಪಾಯ್ತು, ಜಲ್ದಿ, ನಿಮ್ಮನೆಗೆ ಬರ್ತೀನಿ" ಅಂದು ನಾಜಿಯಳನ್ನು  ಸಮಾಧಾನ ಪಡಿಸಿ ತಮ್ಮ ಊರಿಗೆ ಹಿಂದಿರುಗಿದರು. ಮುದುಡಿದ ಮನಸಲ್ಲೇ ನಾಜಿಯ, ರಫಿಯನ್ನು ಹಲವು ಬಾರಿ "ನನ್ನ ಕೈ ಬಿಡಬೇಡ ರಫಿ, ನಾನಿರೋದೆ ನಿನಗಾಗಿ" ಹೇಳುತ್ತಿದಳು. ಹಾಗೆಯೇ ಅವನೂ ಸಹ ನಮ್ಮ ಸುಂದರ ಕ್ಷಣಗಳನ್ನ ನೆನಸಿಕೊ ಎಂದು, ಸಮಾಧಾನ ಪಡಿಸುತ್ತಿದ್ದ.
----
ಆ ವಾರದಲ್ಲೇ ಸ್ನೇಹಿತೆ ನಜ್ಮ "ಸುನಾ ಕ್ಯಾ, ಉಮ್ರಾವ್ ನಿಕಾಃ  ಮುರಿದುಬಿತ್ತು". ಎಂದಳು ನಾಜಿಯ ಬಳಿ .
"ಯಾಕೆ, ಕ್ಯಾ ಹುಆ"
"ಅವಳ ಪಹಲಿ ರಾತ್ ಕಿ ಚಾದರ್ ಮೇಲೆ ಖೂನ್ ಬಿದ್ದಿರಲಿಲ್ಲವಂತೆ. ಅದಕ್ಕೆ, ನಿನ್ನೆ ತಲಾಖ್ ಆಯ್ತು" ಎಂದಳು ನಜ್ಮ.
"ಹಾಗೆಲ್ಲ ಸಂಪ್ರದಾಯ ಹೀಗೂ ಇದೆಯಾ?"
"ಏನು, ಮಾಡೋದು ನಾಜು. ಇದೊಂದು ಕೆಟ್ಟ ಸಂಪ್ರದಾಯ ನಮ್ಮಲ್ಲಿ ಇನ್ನು ಉಳಿದಿದೆ. ಮೊದಲಿನಂತೆ ಹೆಣ್ಣು ಮನೆಯಲ್ಲೇ ಉಳಿದ ವಸ್ತುವಾಗಿಲ್ಲ. ಹೊರಗೆ ಹೋಗಿ ಬರ್ತಾಳೆ. ಅವಳಲ್ಲೂ ಹಲವು ದೈಹಿಕ ಬದಲಾವಣೆ ಕಂಡುಬರುತ್ತೆ. ಅವಳು ಎಷ್ಟೇ ಪವಿತ್ರ ಆಗಿದ್ದರು ಈ ಒಂದು ಪಹಲಿ ರಾತ್ ಕ ಚಾದರ್ ನೋಡುವ ಸಂಪ್ರದಾಯದಿಂದ ಅವಳ ಬಾಳು ನರಕ" ಎಂದು  ನಾಜಿಯಳ  ಮನದಲ್ಲಿ ವಿಷದ ಬೀಜ ಬಿತ್ತಿ ಹೋದಳು ನಜ್ಮ.
ನಾಜಿಯ ಮೈಯಲ್ಲಿ ಕೆಲ ಬದಲಾವಣೆ  ಕಂಡು ಬಂದಿತು. ತಾನು ಗರ್ಭಿಣಿ ಏನೋ ಆತಂಕ ಕಾಡುತಿತ್ತು. ಇತ್ತ ರಫೀಕ್ ಸಹ ಸಿಗುತ್ತಿರಲಿಲ್ಲ. ತನ್ನಲ್ಲಿ ಆಗುತ್ತಿರುವ ಬದಲಾವಣೆ ಹೇಳಿಕೊಳ್ಳಬೇಕು ಎಂದು ಭೇಟಿಯಾದರೆ,
 "ಪರೀಕ್ಷೆ ಸಮಯ ನಾಜು, ನಿನಗೂ ಗೊತ್ತಲ್ಲವ ಕೆಲಸಕ್ಕೆ ಎಷ್ಟು ತೊಂದರೆ ಅಂತ. ಚೆನ್ನಾಗಿ ಓದಿದರೆ ಒಳ್ಳೆ ನೌಕರಿ ಸಿಗುತ್ತೆ." ನೌಕರಿ ಸಿಕ್ಕ ತಕ್ಷಣ ನಮ್ಮ ನಿಕಾಃ " ಎಂದ ರಫೀಕ್.
 ತಾನು ಗರ್ಭಿಣಿ ಎಂದು ತಿಳಿದು ಹೋಗಿತ್ತು. ಧೈರ್ಯದಿಂದ ಮೀರಾಳ ಬಳಿ ಹೇಳಿದಳು. ಮೀರಾ ಆತಂಕದಿಂದ ಸಮಸ್ಯೆ ಬಗೆ ಹರಿಸಲು ಹೇಳಿದಳು. ಆಗ ಕಂಡಿದ್ದು ಶಹಬ್. ಅವನ ಬಳಿ ಇಬ್ಬರೂ ಹೋಗಿ ಸಮಸ್ಯೆ ಹೇಳಿದರು.
ಅವನು ಕನಿಕರದಿಂದ ರಫೀಕ್ ನ ಕೇಳಿದ ಆದರೆ ಆ ಹೊತ್ತಿಗಾಗಲೇ ರಫಿ ದುಬೈ ಗೆ ಹಾರಿದ್ದ.
ಇತ್ತ ನಾಜಿಯ ತನ್ನ ಒಂದು ಕ್ಷಣದ ತಪ್ಪಿಗೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಳು. ಶಹಬ್ ಹಾಗು ಮೀರಾ,  ನಾಜಿಯಳ ಮನವೊಲಿಸಿ ಭ್ರೂಣ ತೆಗೆಸಲು ನಿರ್ಧರಿಸಿದರು.
ನಾಜಿಯ ತಂದೆಗೆ ಹೃದಯ ಶಸ್ತ್ರ ಚಿಕಿತ್ಸೆ ಅದೇ ಸಮಯದಲ್ಲಿ ಆಗಿತ್ತು. ಎಲ್ಲರೂ ಅತ್ತಕಡೆ ಗಮನ ಹರಿಸಿದ್ದರಿಂದ ನಾಜಿಯ ಬಗ್ಗೆ ಅಷ್ಟೊಂದು ಗಮನ ಹರಿಸಲಿಲ್ಲ.
ಆದರೆ ಮುಂದೆ ತನ್ನನ್ನು ಯಾರು ಮದುವೆ  ಆಗ್ತಾರೆ, ಅಮ್ಮಿ-ಅಬ್ಬನ ಖಾಂದನ್  ಮರ್ಯಾದೆ ಹಾಳಾಗಿ ಹೋಗುತ್ತೆ.
ನಾ ತಪ್ಪು ಮಾಡಿಬಿಟ್ಟೆ ಅಂದು ಮತ್ತೊಮ್ಮೆ ಆತ್ಮಹತ್ಯೆ ಗೆ ಪ್ರಯತ್ನಿಸಿದಳು.
ಆಗ ಅವಳ ನೆರವಿಗೆ ಬಂದದ್ದು ಶಹಬ್.
"ಹೇಗೂ ನಾವು ಸಂಬಂಧಿಕರು, ನಾವು ನಿಕಾಃ ಮಾಡಿಕೊಳ್ಳೋಣ. ಆಗಿದ್ದೆಲ್ಲ ಕೆಟ್ಟ ಕನಸೆಂದು ಮರೆಯಬೇಕು ನಾಜಿಯ. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತಿನಿ. ಯೋಚನೆ ಬೇಡ. ಮುಂದಿನ ದಾರಿ ನೋಡಿಕೊಳ್ಳುವ. ಅವನು ನಿನ್ನ ಮರೆತು ಸುಖವಾಗಿ ಇದ್ದಾನೆ. ನೀನು ಅವನ ನೆನಪಲ್ಲಿ ಸಾಯಲು ಸಿದ್ಧವಾಗಿದ್ದಿಯ. ನನ್ನ ಮೇಲೆ ನಂಬಿಕೆ ಇಟ್ಟು  ಈ ನಿಕಾಃ  ಒಪ್ಪಿಕೊ. ಸಮಯ ತಗೋ " ಎಂದು ಧೈರ್ಯ ಹೇಳಿ ಹೋದ ಶಹಾಬುದ್ದೀನ್.
"ಆಯ್ತು" ಎಂದು ಮೀರಾ ಸಲಹೆ ಕೇಳಿ 2-3 ತಿಂಗಳ ನಂತರ ಶಹಬ್ ನ ಮಾಡುವೆ ಮಾಡಿಕೊಳ್ಳಲು ನಿರ್ಧರಿಸಿದಳು ನಾಜಿಯ.
ಶಹಬ್ ನ ಮನೆ ಮನೆತನ ದೊಡ್ಡದು. ಇಬ್ಬರು ಅಕ್ಕಂದಿರು, ಇಬ್ಬರು ಅತ್ತಿಗೆಗಳು, ತಂಗಿ, ತಮ್ಮ, ಅಬ್ಬ-ಅಮ್ಮಿ ಎಲ್ಲರು ಒಟ್ಟಿಗೆ ವಾಸ ಮಾಡುತ್ತಿದ್ದರು. ಅಲ್ಲಿನ ಬಾಳು ಕಷ್ಟ ಎಂದು ತಿಳಿದಿದ್ದರೂ, ಶಹಬ್ ನ ಮೇಲಿನ ನಂಬಿಕೆಯಿಂದ  ಆ ಮನೆಗೆ ಸೊಸೆಯಾಗಿ ಬಂದಳು. ಮದುವೆಯ ಮೊದಲ ರಾತ್ರಿ ಶಹಬ್ ನಾಜಿಯ ಒಂದಾದರು. ನಾಜಿಯ ಅವನ ಪ್ರೀತಿ, ವಿಶ್ವಾಸಕ್ಕೆ ಸೋತುಹೋದಳು.
ಬೆಳಿಗ್ಗೆ ಶಹಬ್ ಹೊರಗೆ ಹೋಗಲು, ನಾಜಿಯ ಸ್ನಾನಕ್ಕೆಂದು ಹೋಗಿ ಬಂದಳು. ಶಹಬ್ ನ ಕೊಟಡಿಯಲ್ಲಿ  ಅಕ್ಕಂದಿರು, ಅತ್ತಿಗೆ ಬಂದು, ಏನೇನೋ ಗುಸುಗುಸು ಮಾತಾಡುತಿದ್ದರು. ನಾಜಿಯ ಹೊರ ಬಂದಿದ್ದನ್ನು ನೋಡಿ ತಮ್ಮ ಪಾಡಿಗೆ ತಾವು ಅಲ್ಲಿಂದ  ಹೋದರು.
ಬೆಳಗಿನ ಉಪಾಹಾರ ಚಹಾ ಎಲ್ಲ ಮಗುಮ್ಮಾಗಿ ಮುಗಿಯಿತು.
ಒಳಗಿನಿಂದ ಶಹಬ್ ನ ತಾಯಿ " ಹಾಯ್!! ಅಲ್ಲಾಹ್ , ಎಲ್ಲಿಂದ ಗಂಟು ಬಿದ್ದಳೋ. ಬೇಡ ಅಂದರೂ ಇವಳೇ ಬೇಕು ಅಂದ. ಹೋಯ್ತು ನಮ್ಮ ಖಾಂದನ್ , ಮರ್ಯಾದ ಎಲ್ಲ " ಎಂದು ಅಳುತಿದ್ದರು.
ಏನೆಂದು ಅರಿಯುವ ಮೊದಲೇ ಅಲ್ಲ್ಲಿ ಇರುವ ಎಲ್ಲರ ಕಣ್ಣು ನಾಜಿಯಳನ್ನು ಇರಿಯುತ್ತಿದ್ದವು.
"ಏನೂ ಆಗಿಲ್ಲ ಬಿಡು ಬೇಗಂ" ಎನ್ನಲು ನಾಜಿಯ ಮಾವ,
"ಅರೆ ಅಲ್ಲಾಹ್, ಈ ರಂಡಿ ಬೇಡ ಅಂದೆ. ಈ ಮನೆಹಾಳ ಹೋಗಿ ಗಂಟು ಬಿದ್ದ. ಇನ್ನು ನಮ್ಮ ಸಲೀಮ ನಿಕಾಹ್ ಹೇಗೆ ಮಾಡೋದು?. ಗೊತ್ತ ನಿಮಗೆ" ಎಂದು ದುರುಗುಟ್ಟಿದಳು.
"ಏನು ಎಂದು? " ತನ್ನಲ್ಲೇ ತಬ್ಬಿಬ್ಬುಗೊಳ್ಳುತ್ತಾ ನಾಜಿಯ ತನ್ನ ಕೋಣೆಯತ್ತ ಸಾಗಲು, ಆಕೆಯ ಮೊದಲ ವಾರಗಿತ್ತಿ ಸಕೀನಾ,
ಬಂದು ಬಾಗಿಲು ಹಾಕಿ ಮೆಲ್ಲಗೆ ನಾಜಿಯ ಹತ್ತಿರ ಬಂದು,
"ಈ ಮನೆ ಖಾನ್ದಾನ್ ಉಳಿಯಬೇಕಂದರೆ  ನಿಜ ಹೇಳು ನಾಜಿಯ, ಚಾದರ್ ಮೇಲೆ ಖೂನ್ ಯಾಕೆ ಇಲ್ಲ?" ಎಂದಳು.
ಆಗ ನಾಜಿಯಗೆ ಅರಿವಾಗತೊಡಗಿತು. ಇವರೆಲ್ಲ ಚಾದರ್ ಬಗ್ಗೆ ಹೇಳುತ್ತಿದ್ದಾರೆ.
ಅಲ್ಲಾಹ್ ಎಂತ ದುರ್ಗತಿ ಬಂತು.  ಏನೂ ಹೇಳೋದು? ಶಹಬ್ ಬೇರೆ ಇಲ್ಲ. ದೇವರೇ ನೀನೆ ಕಾಪಾಡಬೇಕು. ಎಂದು
"ದೀದಿ, ಹಾಗೇನು ಇಲ್ಲ ರಾತ್ರಿ ಏನೂ ಅಗಿಲ್ಲ." ಅಂದಳು.
"ಸುಳ್ಳು ಹೇಳಬೇಡ ನಾಜಿ!!, ನಾನು ಇಲ್ಲಿಯ ದೊಡ್ಡ ಸೊಸೆ, ಶಹಬ್ ಹೇಳಿದ ಪಹೇಲಿ ರಾತ್ ಆಯ್ತು ಅಂತ. ನನ್ನ ಮಾತಿಗೆ ಬೆಲೆ ಇಲ್ಲವ?".
"ಏನಿಲ್ಲ ದೀದಿ" ಎಂದು ಬಿಕ್ಕಿ ಅತ್ತಳು.
"ಸರಿ, ಶಹಬ್ ಬರ್ತಾರೆ. ಮಾತಾಡುವಾ" ಅಂತ ಹೊರ ಹೋದಳು.
ನಾಜಿಯಗೆ ಒಂದೊಂದು ಕ್ಷಣವೂ ನಿಮಿಷಗಳಂತೆ ಉರುಳುತಿತ್ತು. ಒಳಗಿಂದ ಏನೇನೋ ಬೈಗುಳಗಳು ಈಟಿಯಂತೆ ಕಿವಿಗೆ ಬೀಳುತ್ತಿದವು. "ಅಲ್ಲಾ!!  ಎಲ್ಲಿಂದ ಎಲ್ಲಿಗೆ ಬಂದೆ. ಅಂದೇ  ಚೆನ್ನಿತ್ತು" ನೊಂದಳು.

ಅಷ್ಟರಲ್ಲೇ ಶಹಬ್ ಬಂದ. ಆತನ ಅಮ್ಮಿ
"ಬೇಟ, ಬೇಡ ಅಂತ ಹೇಳಿದ್ದೆ ಅವಳನ್ನೇ ನಿಕಾಹ್ ಮಾಡಿಕೊಂಡೆ. ಈಗ ನೋಡು ನಮ್ಮ ಖಾಂದಾನ್  ಮರ್ಯದ ಹೊಯ್ತು. ತಲ್ಲಾಕ಼್ ಕೊಟ್ಟುಬಿಡು. ನಿಂಗೆ ಬೇರೆ ನಿಕಾಹ್ ಮಾಡ್ತೀನಿ " ಎಂದು ಬೊಬ್ಬಿರಿಯುತ್ತಿದ್ದ ಮಾತನ್ನು ಕೇಳಿ ನಾಜಿಯ ಮನದಲ್ಲಿ ನೂರು ಡಂಗುರ ಬಾರಿಸಿದ ಹಾಗೆ ಆಯಿತು.
"ಅಮ್ಮೀ, ಹಾಗೇನು ಆಗಿಲ್ಲ. ಈಗೆಲ್ಲ ಹುಡುಗಿಯರು ಕೆಲಸ, ಆಟ, ಎಲ್ಲದರಲ್ಲೂ ಇದ್ದರೆ. ಏನೂ ಆಗಿಲ್ಲ. ನಾಜಿಯ ಒಳ್ಳೆ ಲಡ್ಕಿ ಹಾಗೆ ಒಳ್ಳೆ ಮನೆಯವಳು ಸಹ " ಎನ್ನಲೂ,
"ಶಹಬ್, ನಿನಗೆ ಅವಳು ಏನು  ಮೋಡಿ  ಮಾಡಿದ್ದಳೋ? ನಮ್ಮ ಖಾನ್ದಾನ್ ನಲ್ಲಿ ಇಂತ ಹುಡುಗಿ ಬೇಡ. ಸುಮ್ನೆ ಅವಳನ್ನೇ ಮಾಡುವೆ ಆಗ್ಬೇಕು ಅಂತ ಹಠ ಮಾಡಿದ್ದಿ ನೀನು. ನನಗಂತೂ ಇಷ್ಟ ಇಲ್ಲ. ನಿನ್ನ ಬೆಹೆನ್ ನಿಕಾಹ ಯಾರು ಮಾಡ್ತಾರೆ ?"
ಎಂದು ಅಳಲು ಶುರು ಮಾಡಿದಳು.
ಇತ್ತ ನಾಜಿಯ, ' ರಫೀ, ನೋಡು ನಿನ್ನ ತಪ್ಪಿನಿಂದ ನನ್ನ ಜೀವನ ಅಲ್ಲದೆ ಇಲ್ಲಿ ಎಲ್ಲರ ಜೀವನ ಕೆಡುತ್ತಿದೆ. ಅಲ್ಲಾ, ನಾನಿನ್ನು ಬದುಕಬೇಕೆ? ಶಹಬ್ ಜೀ' ಎಂದು ಕಂಗೆಟ್ಟಳು.

ಕೋಪಿಸಿಕೊಂಡ ಶಹಬ್ ರಾತ್ರಿ ಮನಗೆ ಬರಲಿಲ್ಲ.  ಅಂದು ರಾತ್ರಿ ನಾಜಿಯ ಗೆ ಊಟ ಸಿಗಲಿಲ್ಲ. ಮತ್ತದೇ ಮಾತುಗಳು ಅವಳನ್ನು ಇರಿಯುತ್ತಿದ್ದವು. ಮಾರನೆಯ ದಿನ ಬಂದ ಶಹಬ್,
"ಮಾಫ್ ಕರೋ ನಾಜಿಯ, ಏನೋ ಬೇಸರ ಆಯ್ತು. ನಿನಗೇನು ತೊಂದರೆ ಆಗೊಲ್ಲ. ಅಮ್ಮಿ ಸ್ವಲ್ಪ ಹಾಗೆನೆ. ಸರಿ ಹೋಗ್ತಾರೆ" ಎಂದ.
"ಶಹಬ್ ಜೀ, ನನ್ನಿಂದ ನಿಮಗೆಷ್ಟು ತೊಂದರೆ ಕಷ್ಟ ನೋವು. ನನಗೆ ತಲ್ಲಕ಼್ ಕೊಟ್ಟುಬಿಡಿ, ಬೇರೆ ಒಳ್ಳೆ ಲಡ್ಕಿ ನೋಡಿ ನಿಕಾಹ್ ಮಾಡಿಕೊಳ್ಳಿ" ಎಂದಳು.
"ನಾಜಿಯ! ಕ್ಯಾ ಬಾತ್ ಕರ್ ರಹೇ ಹೊ. ನಿನ್ನ ಮದುವೆ  ಆಗಿದ್ದು ತಲ್ಲಾಕ಼್ ಕೊಡೋದಿಕ್ಕೆ  ಅಲ್ಲ. ಇನ್ನೆಂದು ಈ ರೀತಿ ಮಾತು ಆಡಬೇಡ" ಎಂದು ಹೊರಗೆ ಹೋದ.

ಇತ್ತ ನಾಜಿಯ ಇಬ್ಬಂದಿ ಸ್ಥಿತಿಯಲ್ಲಿ ಒಳಗೊಳಗೇ ನಳುಗುತ್ತಿದಳು. ಮದುವೆ ಆಗಿ ಕೆಲವು ತಿಂಗಳು  ಕಳೆದಿದ್ದರೂ ಆಕೆಗೆ ಅಲ್ಲಿ ಸ್ವಾತಂತ್ರ್ಯವಿರಲಿಲ್ಲ. ಏನೇ ಕೆಲಸ ಮಾಡಿದರು ಅಲ್ಲೊಂದು ಕೊಂಕು, ಅಸಡ್ಡೆ ಅವರ ಮನೆಯಲ್ಲಿ ಕಾಣುತಿತ್ತು. ಬಂದು ಹೋಗೋ ಬಂಧುಗಳೂ ಸಹ ಆಕೆಯ ಬಳಿ ಮಾತನಾಡಲು ಹಿಂಜರಿಯುತ್ತಿದ್ದರು. ಮನೋವೇದನೆಯಲ್ಲಿ ನಾಜಿಯ ನರಳುತ್ತಿದ್ದಳು.
ಶಹಬ್ ಸಹ ಮೊದಲಿನ ಆಸಕ್ತಿ, ಅಕ್ಕರೆ ತೊರಿಸುತ್ತಿರಲಿಲ್ಲ. ನಾಜಿಯ ಒಂಟಿಯಾಗಿ ತನ್ನ ಪಾಡಿಗೆ ತಾನು ಖುರಾನ್ ಪಠನ ಮಾಡುತ್ತಾ, ಸಿಕ್ಕಷ್ಟು ಊಟ ಮಾಡುತ್ತಿದಳು. ಆಕೆ ಅದೊಂದು ಸೆರೆಮನೆಯಾಯಿತು.

ಹೀಗೊಮ್ಮೆ ಶಹಬ್ ತಂಗಿಗೆ ವರನನ್ನು ನೋಡಲು ಎಲ್ಲರೂ ದೂರದ ಊರಿಗೆ ೪ ದಿನ ಹೋಗಬೇಕಾಯಿತು. ಶಹಬ್ ತನಗೆ ಕೆಲಸ ಇದೆ ಮೈಸೂರಿಗೆ ಹೋಗಲೇಬೇಕು ಅಂತ ಹೋಗಲಿಲ್ಲ. ಮನೆಯ ಯಾರೊಬ್ಬರು ಸಹ ನಾಜಿಯಳನ್ನು ಕರೆಯಲಿಲ್ಲ.
ಮನ ನೊಂದ ಸಧ್ಯ ಈಗಲಾದರೂ ಅಮ್ಮೀ ಮನೆಗೆ ಹೋಗಬಹುದು ಎಂದು ಶಹಬ್ ನ ಕೇಳಿ ಹೋಗಬೇಕೆಂದು ನಿರ್ಧರಿಸಿದಳು.
ಆದರೆ ಆ ರಾತ್ರಿ ಶಹಬ್ ಬರೋದಿಲ್ಲ, ಬಂದರೆ ತಡ ಆಗುತ್ತೆ ಒಂದೆರಡು ದಿನ ಬಿಟ್ಟು ಹೋಗು ಎಂದು ಮೈಸೂರಿಗೆ ಹೋದ.
ಹೇಗೂ ತಡ ಆಗುತ್ತಲ್ಲ ಎಂದು ಆ ರಾತ್ರಿ ನಾಜಿಯ ಬೇಗನೆ ಊಟ ಮುಗಿಸಿ ಟಿವಿ ನೋಡುತ್ತಾ ಇರಲು, ಬಾಗಿಲು ಬಡಿದ ಸದ್ದಾಯಿತು. ಶಹಬ್ ಬಂದನೆಂದು ಬಾಗಿಲು ತೆರೆದರೆ ಬಂದದ್ದು ಆತನ ಅಣ್ಣ ಮುಷ್ತಾಕ್.
ಗಾಬರಿಯಿಂದ ನಾಜಿಯ "ಆಪ್ ?" ಎನ್ನಲು,
"ಹಾ, ಆರೋಗ್ಯ ಸರೀಲ್ಲ ಅದಕ್ಕೆ ಬಂದೆ" ಎಂದ ಮುಷ್ತಾಕ್.
ಅವನು ಮಾತಾಡುವಾಗ ಮದ್ಯಪಾನ ಮಾಡಿದ ವಾಸನೆ ಬಡಿಯಿತು ನಾಜಿಯಳಿಗೆ. ಭಯದಿಂದ ಮನಸಲ್ಲೇ "ಅಲ್ಲಾ" ಎಂದು ಗೋಗರೆದಳು. ಟಿವಿಯನ್ನು ಆರಿಸಿ ತನ್ನ ಕೋಣೆಗೆ ಹೋಗಲು ಮುಷ್ತಾಕ್, ಹಿಂದೆಯೇ ಬಂದು
"ನಾಜಿಯಾ, ಇವತ್ತೊಂದಿನ ನನ್ನವಳಾಗು, ನಿನ್ನ ರಾಣಿ ಹಾಗೆ ನೋಡ್ಕೋತೀನಿ" ಎಂದು ತನ್ನ ಎದೆ ಸವರಿಕೊಂಡ.
"ಹಾಯ್ ಅಲ್ಲಾ , ಏನಾಗಿದೆ ನಿಮಗೆ. ಕುಡಿದು ಬಂದಿದ್ದಿರ.. ನಿಮ್ಮ ಕೋಣೆಗೆ ದಯವಿಟ್ಟು ಹೋಗಿ" ಎಂದು ಹೇಳಿದಳು.
"ಅರರೆ, ಸಿರ್ಫ್ ಏಕ ರಾತ್ ಬಾ ನನ್ನ ಜೊತೆ, ನೀನು ಹಾಸಿಗೆ ಮೇಲೆ ಶಹಬ್ ಜೊತೆ ಸುಖ ಪಟ್ಟಿದ್ದು ಎಷ್ಟು ಅಂತ ಗೊತ್ತು.
ನಿನ್ನ ಸೋನೆ ಕಿ ಜಿಸ್ಮ್ ನನಗೆ ಅವತ್ತಿಂದ ದೀವಾನ ಮಾಡಿದೆ. ನಿನಗೆ ಸ್ವರ್ಗ ಏನು ಅಂತ ತೋರಿಸ್ತೀನಿ" ಎಂದು ಕೆಟ್ಟದಾಗಿ ನಕ್ಕ.
"ಜೀ, ನೀವು ನನ್ನ ಬೈಯ್ಯಾ ರೀತಿ. ಇಲ್ಲಾಂದ್ರೆ ಕಿರಿಚಿ ಸುತ್ತ ಮುತ್ತ ಮನೆಯವರನ್ನೆಲ್ಲ ಕರೀತೀನಿ. ನಿಮ್ಮ ಮರ್ಯಾದೆ ಏನೂ ಅಂತ ತೋರಿಸ್ತೀನಿ" ಎಂದು ಜೋರಾಗಿಯೇ ಹೇಳಿದಳು.
"ಗೊತ್ತು ಬಾರೆ, ನಿನ್ನ ಮರ್ಯಾದಾ..? ನೀನು ರಫೀಕ್ ಸುಖ ಪಟ್ಟದ್ದು, ಸುತ್ತಾಡಿದ್ದು ಎಲ್ಲ ಗೊತ್ತು. ಅದನ್ನ ಹೇಳಿದರೆ ಯಾರ ಮರ್ಯಾದ ಹೋಗುತ್ತೆ ನೋಡ್ಕೋ. ಈಗ ಬರ್ತಿಯೋ ಇಲ್ಲವೊ..?" ಎಂದು ಕೈ ಹಿಡಿಯಲು, ನಾಜಿಯ ತನ್ನ ಗುಟ್ಟು ಇವನಿಗೆ ಹೇಗೆ ಗೊತ್ತಾಯಿತು
"ಅಲ್ಲಾಹ್ ಹಾಗೇನಿಲ್ಲ, ಬಿಟ್ಟುಬಿಡಿ" ಎಂದಳು.
"ರಂಡೀ, ನೀನು ಎಂಥವಳು ಅಂತ ಗೊತ್ತು" ಎಂದು ನಾಜಿಯ ಕೆನ್ನೆಗೆ  ಬಾರಿಸಿದ.
ಅವಳು ಬವಳಿ ಬಂದು ಬಿದ್ದು ಬಿಟ್ಟಳು. ಮುಷ್ತಾಕ್ ತನ್ನ ಕಾಮದಾಹ ತೀರಿಸಿಕೊಂಡ. ರಾತ್ರಿಯೇ ಹೊರಗೆ ಹೋದ.
ತನಗಾದ ಆಘಾತದಿಂದ ಚೇತರಿಸಿಕೊಳ್ಳದ ನಾಜಿಯ ಶಹಬ್ ಗೆ ಫೋನ್ ಮಾಡಿದಳು. ಒಂದೆರಡು ಗಂಟೆಯಲ್ಲಿ ಶಹಬ್ ಬಂದು ಆರೈಕ ಮಾಡಿದ. ರಾತ್ರಿಯ ಘಟನೆ ತಿಳಿಸಿದಳು.

"ಮಾಫ್ ಕರಿಯೇ ಶಹಬ್ ಜೀ, ನಾನು ನಿಮಗೆ ಒಳ್ಳೆ ಬೀವಿ  ಅಲ್ಲ. ನನ್ನ  ಜೀವನ  ಈ ಚಾದರ ನಂತೆ ಮೈಲಿ ಆಯ್ತು.
ಈ ಮನೆಯಲ್ಲಿ ನನಗೆ ಸ್ಥಾನ ಮಾನ ಇಲ್ಲ. ಇನ್ನು ಈ ರೀತಿಯ ಅತ್ಯಾಚಾರಗಳು ನನಗೆ ತಡೆಯಲು ಆಗೋಲ್ಲ. ನಾನು ನಿಮಗೆ ಯೋಗ್ಯಳಲ್ಲ. ನಾನು ಈಗ ಒಂದು ನಿರ್ಧಾರಕ್ಕೆ ಬಂದಿದ್ದೀನಿ, ಒಂದು ಸಾಯಬೇಕು ಇಲ್ಲಾಂದ್ರೆ ನೀವು ನನಗೆ ತಲ್ಲಾಕ್  ಕೊಡಬೇಕು. ಎಲ್ಲಾದರೂ ದೂರ ಹೋಗಿ ನನ್ನ ಪಾಡಿಗೆ ನಾನು ಬದುಕುತ್ತಿನಿ. ಇಂತ ಸೆರೆಮನೆ ನನಗೆ ಬೇಡ ಶಹಬ್ " ಎಂದು ಅವನ ಕಾಲ ಬಳಿ  ಕುಸಿದಳು.

"ಇಲ್ಲ ನಾಜಿಯ ನಿನ್ನ ಬಿಟ್ಟು ಬದುಕೋಕೆ ನನಗೆ ಆಗೋಲ್ಲ. ಆಗಿದ್ದೆಲ್ಲ ಮರೆತು ಬೇರೆ ಮನೆ ಮಾಡೋಣ" ಎಂದ.
"ಬೇಡ ಶಹಬ್ ಜಿ, ನನ್ನಿಂದ ನಿಮಗೆ ಮುಂದೆಯೂ ತೊಂದರೆ ಆಗುತ್ತೆ, ನೀವು ಬೇರೆ ನಿಕಾಹ್ ಮಾಡಿಕೊಂಡು ಸುಖವಾಗಿರಿ" ಎಂದಳು.
"ಆಗೋಲ್ಲ ನಾಜಿಯಾ" ಎಂದ ಶಹಬ್.
"ಆಗೋಲ್ಲ ಅಂದರೆ .. ನಾನೇ ನಿಮಗೆ ತಲ್ಲಾಕ್ ಕೊಡ್ತೀನಿ" ಎಂದು
"ತಲ್ಲಾಕ್ .. ತಲ್ಲಾಕ್ ... ತಲ್ಲಾಕ್ " ಎಂದು ಮೂರು ಬಾರಿ ಹೇಳಿ ತನ್ನ ಪಾಡಿಗೆ ತಾನು ಮಂಚದ ಮೇಲೆ ಮಲಗಿದಳು.












Thursday, December 29, 2011

Six Sigma - ಸಿಕ್ಸ್ ಸಿಗ್ಮಾ

 ಸಿಕ್ಸ್ ಸಿಗ್ಮಾ - ಗುಣಮಟ್ಟ ಕಾರ್ಯ ವಿಧಾನ
       ಇಂದಿನ ಸ್ಪರ್ಧೆಗಳ ನಾಗಾಲೋಟದಿಂದ ಔನ್ನತ್ಯದೆಡೆಗೆ, ಮತ್ತು ಪರಿಣಾಮವಾಗಿ, ಇದು ಭಾರತೀಯ ಸಂಸ್ಥೆಗಳಲ್ಲಿ ಸಿಕ್ಸ್ ಸಿಗ್ಮಾ ಅಳವಡಿಸಿಕೊಳ್ಳುವುದು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ  ಎಂದರೆ ಅಚ್ಚರಿ ಇಲ್ಲ.
ಸಿಕ್ಸ್ ಸಿಗ್ಮಾ ಈಗ ಗಣನೀಯವಾಗಿ ಹಣಕಾಸು ನಿರ್ವಹಣೆಯನ್ನು ಸುಧಾರಿಸಲು ಸಲುವಾಗಿ ಪ್ರಕ್ರಿಯೆಗಳು, ಉತ್ಪನ್ನಗಳು, ಸೇವೆಗಳು ಮತ್ತು ಕೆಳ ಸ್ತರದ ತೊಂದರೆಗಳನ್ನು ಸುಧಾರಿಸಲು ಅತ್ಯಂತ ಕಾನೂನುಬದ್ಧ ಮಾರ್ಗ ಎಂದು ಗುರುತಿಸಲಾಗಿದೆ. 
ಇತ್ತೀಚಿಗೆ ಭಾರತೀಯ ಉದ್ದಿಮೆಗಾರು ವೆಚ್ಚ ಪರಿಣಾಮಕಾರಿಯಾಗಿ ಉದ್ದಿಮೆಗಳನ್ನು, ಆದರೆ ಸಮಂಜಸವಾದ ಕೆಲವೆ ಕೆಲವು ತಮ್ಮ ಕೆಲಸದಲ್ಲಿ ಪರಿಪೂರ್ಣತೆ ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಮತ್ತು ನಿಜವಾದ " World Class Company - ಪ್ರಪಂಚದ ಶ್ರೇಷ್ಠ ಉದ್ದಿಮೆ " ಆಗಲುವಿಧಾನ ಉಪಯೋಗಿಸುತ್ತಿದ್ದಾರೆ. ಇದನ್ನು ತನ್ನದೇ ಆದ ಸ್ವಂತ ಸುಧಾರಣೆ ಯೋಜನೆಗಳಲ್ಲಿ ಬಳಸದ ಹೊರತು ಒಂದು ವಿಧಾನವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ.

[ ಇದು ಕನ್ನಡದಲ್ಲಿ  "ಸಿಕ್ಸ್ ಸಿಗ್ಮಾ - ಗುಣಮಟ್ಟ ಕಾರ್ಯ ವಿಧಾನ " ತಿಳಿಸುವ ನನ್ನದೊಂದು ಸಣ್ಣ ಪ್ರಯತ್ನ. ಇಲ್ಲಿ  ತಪ್ಪುಗಳಿದ್ದರೆ ಕ್ಷಮಿಸಿ.]

ಸಿಕ್ಸ್ ಸಿಗ್ಮಾ ಇತಿಹಾಸದ ಅವಲೋಕನ (ಕೃಪೆ: Wikipedia ಮತ್ತು ಇನ್ನಿತರ ಆಕರಗಳು)

ಸಿಕ್ಸ್ ಸಿಗ್ಮಾ ಅಭಿವೃದ್ಧಿ ವ್ಯವಹಾರ ನಿರ್ವಹಣಾ ತಂತ್ರವನ್ನು 1986 ರಲ್ಲಿ ಅಮೆರಿಕ ಮೂಲದ ಮೊಟೊರೊಲಾ ಸಂಸ್ಥೆಯು ಜಾರಿಗೆ ತಂದಿತು. ಈಗ ಇದನ್ನು ಹಲವು ಕಾರ್ಯ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ.
ಸಿಕ್ಸ್ ಸಿಗ್ಮಾ  ಉತ್ಪಾದನಾ ಹಾಗು ವ್ಯಾಪಾರ ಪ್ರಕ್ರಿಯೆಗಳ ದೋಷ/ಕಾರಣಗಳನ್ನು ಗುರುತಿಸುತ್ತದೆ ಮತ್ತು ಅದನ್ನು ತೆಗೆದುಹಾಕುವ ಪರಿವರ್ತನೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಮತ್ತು ಉತ್ಪನ್ನ, ಪ್ರಕ್ರಿಯೆ ಮತ್ತು ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ವಿಧಾನಗಳನ್ನು ಹುಡುಕುತ್ತದೆ. ಸಿಕ್ಸ್ ಸಿಗ್ಮಾ ದ ಮುಖ್ಯ ಉದ್ದೇಶ ದೋಷ/ಕಾರಣಗಳನ್ನು ತೆಗೆದುಹಾಕುವುದು.

ಸಿಕ್ಸ್ ಸಿಗ್ಮಾ ಮೂಲತಃ ಉತ್ಪಾದನೆಗೆ ಸಂಬಂಧಿಸಿದ ಪದವಾಗಿದೆ. ಮತ್ತು ಉತ್ಪಾದನೆ ಪ್ರಕ್ರಿಯೆಗಳು ಸಂಖ್ಯಾಶಾಸ್ತ್ರದ ಮಾದರಿ ಸಂಬಂಧಿಸಿದ್ದು ಎಂದು ನಿರ್ದಿಷ್ಟವಾಗಿ ತಿಳಿಯಪಡುತ್ತದೆ. ಒಂದು ಉತ್ಪಾದನಾ ಪ್ರಕ್ರಿಯೆಯ ಪರಿಪಕ್ವತೆ ಅದರ ಇಳುವರಿ (yield) ಯನ್ನು ಸಿಗ್ಮಾ ಬೆಲೆ (rating) ತಿಳಿಸುತ್ತದೆ. 1 ದಶಲಕ್ಷ ಉತ್ಪನ್ನ ಗಳಲ್ಲಿ ಕೇವಲ 3.4 ದೋಷಗಳು ಕಂಡುಬರುತ್ತವೆ ಅಂದರೆ 99.99966% ದೋಷಮುಕ್ತ ಉತ್ತ್ಪನ್ನಗಳು ಗ್ರಾಹಕರ ಅರ್ಹ ಗುಣಮಟ್ಟಕ್ಕೆ ಅನುಸಾರವಾಗಿ ಸಿಕ್ಸ್ ಸಿಗ್ಮಾ ಸಂಖ್ಯಾ ಕಾರ್ಯವಿಧಾನದಿಂದ ದೊರಕುತ್ತವೆ.


ಸಿಕ್ಸ್ ಸಿಗ್ಮಾ - ಗುಣಮಟ್ಟ ಕಾರ್ಯ ವಿಧಾನದ ಮುಖ್ಯಾಂಶಗಳು

೧. ಛಂದಶ್ಯಾಸ್ತ್ರ
೨. ಅಳತೆಗೋಲು
೩. ಅವಲೋಕನ 
೪. ತತ್ವ/ತರ್ಕಶಾಸ್ತ್ರ
೫. ವಿಧಾನ/ಕ್ರಮ
೬. ಸಂಕೇತ
೭. ಗುರಿ
೮. ಮೌಲ್ಯ 

ಗುಣಮಟ್ಟ ಕಾರ್ಯ ವಿಧಾನ ಅಂದರೆ ಏನು?
  • ನಾವು ಮಾಡುವ/ತಯಾರಿಸುವ ಉತ್ಪನ್ನ, ಪ್ರಕ್ರಿಯೆ ಮತ್ತು ಸೇವೆಗಳ ದೋಷ/ಕಾರಣಗಳನ್ನು ಆದಷ್ಟು ತಗ್ಗಿಸುವುದು. 
  • ಉತ್ಪನ್ನ, ಪ್ರಕ್ರಿಯೆ ಮತ್ತು ಸೇವೆಗಳ ಅರ್ಹ ಗುಣಮಟ್ಟ ಕಾಯ್ದುಕೊಳ್ಳಲು ಸಹಾಯ ಮಾಡುವುದು. 
  • ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಪಕ ಅಳತೆ ವ್ಯವಸ್ಥೆ ಮಾಡುವುದು.
  • ಉತ್ತಮ ಗುಣಮಟ್ಟದ ಉತ್ಪನ್ನ, ಪ್ರಕ್ರಿಯೆ ಮತ್ತು ಸೇವೆಗಳ ವೆಚ್ಚ ಕಡಿಮೆ ಮಾಡುವುದು.  
ಗುಣಮಟ್ಟ ಕಾರ್ಯ ವಿಧಾನದ ಮನೋಭಾವ ಏನಂದರೆ
  • ಗ್ರಾಹಕ ಕೇಂದ್ರಿತ - ಗ್ರಾಹಕನದ್ದೆ ಅಂತಿಮ ನಿರ್ಧಾರ
  • ಗ್ರಾಹಕನ ಸಂತೃಪ್ತಿ - ಗ್ರಾಹಕರ ಪ್ರಕಾರ ಗುಣಮಟ್ಟ ಕಾಯ್ದುಕೊಳ್ಳುವುದು


ಗ್ರಾಹಕ ಕೇಂದ್ರಿಕೃತ ಪ್ರಶ್ನೆಗಳು

  •  ನಮ್ಮ ಗ್ರಾಹಕ ನಮ್ಮಯ ಕಾರ್ಯ ವಿಧಾನಗಳಿಗೆ/ಪ್ರಕ್ರಿಯೆಗಳಿಗೆ ಅವಶ್ಯವೇ ?
  • ಗ್ರಾಹಕರ ದೃಷ್ಟಿಕೋನದಿಂದ ನಮ್ಮ ಪ್ರಕ್ರಿಯೆ ನಿರ್ವಹಣೆ ಹೇಗೆ?
  • ಹೇಗೆ ನನ್ನ ಗ್ರಾಹಕ ನನ್ನ ಪ್ರಕ್ರಿಯೆ ಅಳತೆ ಮಾಡುತ್ತಾನೆ?
  • ಹೇಗೆ ನನ್ನ ಗ್ರಾಹಕ ನನ್ನ ಪ್ರಕ್ರಿಯೆ ವೀಕ್ಷಿಸುತ್ತಾನೆ?
  • ನಾವು ಇನ್ನು ಉತ್ತಮವಾಗಿ ಏನು ಮಾಡಬಹದು?
  • ನಮ್ಮ ಕಾರ್ಯಕ್ಷಮತೆಯನ್ನು ಗ್ರಾಹಕ ಹೇಗೆ ಇಷ್ಟ ಪಡುತ್ತಾನೆ? 
ಇವೆಲ್ಲವೂ ಗ್ರಾಹಕನುಗುಣವಾಗಿ ಉದ್ದಿಮೆದಾರರು ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಅದನ್ನು ಜಾರಿಗೊಳಿಸಲು ಹಲವು ಕಾರ್ಯತಂತ್ರ /ವಿಧಿ-ವಿಧಾನಗಳನ್ನು ಅನುಸರಿಸಬೇಕಾದಲ್ಲಿ  ಸಿಕ್ಸ್ ಸಿಗ್ಮಾ ಒಂದು ಉತ್ತಮ ಸಾಧನ.

==================================================================

Great Truths about Six Sigma

  


Maths is not always.
Analyze the problems. 




Practice makes perfect.
Do trial and exercise it.
  

Use different tools for different procedures.
Not always the same.






Use Check-lists before walk away from your turn.
The best method for quality work anywhere anytime.


Look for efficient Solutions.




Always listen to market.
Voice of Customers' is important.


Never predict the work  before optimization.
Forecasting is Complex task.









      Nothing Can Stop Automation

      brought to us by various cartoonists

      Tuesday, October 21, 2008

      ನೆನಪೊಳಗೆ


      ಮನಸ್ಸೆಂಬೋ ಅಂಗಳದಾಗೆ ನೆನಪುಗಳು ನೂರು.. ಸಾವಿರ.. ಲಕ್ಷ ನಕ್ಷತ್ರಗಳಂತೆ
      ಕೆಲವು ಮಿಂಚುತ್ತಲೇ ಇರುತ್ತವೆ, ಕೆಲವು ದೂರ ಬೀಳುವ ನಕ್ಷತ್ರ ಗಳಾಗಿ ಮರೆಯಾಗಿ ಹೋಗುತ್ವೆ....
      ಈಗೀಗ ರಾತ್ರಿ ವೇಳೆ ಆಕಾಶ ನೋಡುವರಾರು?

      ಅದೋ ಅಲ್ಲಿ ' ಚಂದ್ರ ' .. ಬರ್ತಾನೆ ನಿನ್ನ ಕೈಯಲ್ಲಿರೋ ಚಾಕೊಲೆಟ್ ನ ತಿಂತಾನೆ.. ಬೇಗ ತಿನ್ನು .. ಅನ್ನುವ ಅಮ್ಮಈಗ ಟಿ ವಿ ಯಲ್ಲಿ ಬರುವ ಅದೇ ರಾಗ , ಅದೇ ತಾಳದ ಧಾರಾವಾಹಿ ಗಳನ್ನ ನೋಡುತ್ತಾ ಸುಂದರ ಚಿತ್ತಾರದ ರಾತ್ರಿಗಳನ್ನ ಅಲ್ಲಿಯೇ ಕಳೆಯುತ್ತಿದ್ದಾಳೆ.
      ಮಗು ಅತ್ತರೆ ಟಿ ವಿ ಯಲ್ಲಿ ಯಾವುದೊ ಚಾನೆಲ್ ಹಾಕಿ ಅದೇ ಪ್ರಪಂಚ ಎನ್ನುವ ಹಾಗೆ ಮಗುವನ್ನ ಕೂರಿಸಿಬಿಡ್ತಾಳೆ ಇಂದಿನ ಅಮ್ಮ. ಮುಂದೆ ಎಂದಾದರು ಆ ಮಗು 'ಮಮ್ಮಿ .. ಅದೇನು ಸ್ಕೈ ನಲ್ಲಿ ಏನೋ ಇದೆ' ಅಂದ್ರೆ ಅದು ಅವಳಿಗೆ ಗೊತ್ತಾಗುತ್ತೋ ಇಲ್ವೋ.. 'ಸುಮ್ಮನೆ ಗೂಗಲ್ ನೋಡಿ ತಿಳ್ಕೋ ಟೈಮ್ ಇಲ್ಲ' ಅನ್ನಬಹುದೇನೋ?
      ಮೊದಲೆಲ್ಲ ವಿಜ್ಞಾನಿಗಳು ಆಕಾಶವನ್ನ ಬರಿಗಣ್ಣಿಂದ ನೋಡಿ ನೋಡಿ ಅದು ಚಂದ್ರ ನಕ್ಷತ್ರ, ಸೂರ್ಯ, ಗ್ರಹ , ಉಲ್ಕೆ, ಧೂಮಕೇತು ಎಂದೆಲ್ಲ ಹೆಸರಿಟ್ಟರು. ಈಗ ಏನಿದ್ದರೂ ಉಪಗ್ರಹ ಹಾರಿಸು ಅಲ್ಲಿಂದ ನಾವಿರೋ ಭೂಮಿಯನ್ನೇ ನೋಡು ಇಲ್ಲ ಸುತ್ತ ಮುತ್ತ ಹುಡುಕಿ ಭೂಮಿಗೆ ಇಲ್ಲ ಇನ್ನಿತರ ಗ್ರಹಗಳಿಗೆ ಅಪ್ಪಳಿಸೋ ಉಲ್ಕೆ, ಧೂಮಕೇತು ಗಳನ್ನ ಕರಾರುವಕ್ಕಾಗಿ ತಿಳಿದುಕೊಳ್ತಾರೆ.
      ಮೊದಲೆಲ್ಲ ಬೆಂಗಳೂರಲ್ಲಿ ಶುಭ್ರವಾಗಿರೋ ಆಕಾಶ ನೋಡುವುದು ಖುಷಿ ಆಗ್ತಿತ್ತು.
      ಸಂಜೆಯೆಲ್ಲ ಓರಗೆಯವರೊಂದಿಗೆ ಆಟವಾಡಿ ಸುಸ್ತಾಗಿ ಹೋಂ ವರ್ಕ್ ಬರೆದು, ಊಟ ಮಡಿ ಮತ್ತೊಮ್ಮೆ ಮಲಗುವ ಮುನ್ನ ಹೊರಗೆ ಬಂದಾಗ "ಅಲ್ಲಿ ನೋಡ್ರೋ ನಕ್ಷತ್ರ ಬೀಳ್ತಾ ಇದೆ.. ಈ ಕಡೆ ಈ ಕಡೆ .. ಅಲ್ಲೇ ಶಿವನ ಹಳ್ಳಿ ( ಈಗ ಅದು ಶಿವ ನಗರ ಆಗಿದೆ) ಹತ್ರ.. ಬಿದ್ರೆ ಅಲ್ಲಿ ಯಾರಾದ್ರೂ ಸಾಯ್ತಾರೆ.." ಅಂತ ಭಯ ಬೀಳಿಸೋ ಗೆಳೆಯರು. ಮೊದಲು ಕೆಲವರು ಸತ್ತರೆ ನಕ್ಷತ್ರ ಆಗ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಯಾವುದೇ ಮಕ್ಕಳ್ಳನ್ನ ಕೇಳಿ ಅದೇನು ಅಂದ್ರೆ stars ಅಂಕಲ್ ಅಂತಾರೆ. ಆಗೆಲ್ಲ ದೊಡ್ಡವರು ಅಲ್ಲಿಂದ ನಮ್ಮನ್ನ ನೋಡ್ತಾ ಇರ್ತಾರೆ.. ಕೆಟ್ಟ ಕೆಲಸ ಮಾಡಬಾರದು ಅನ್ನೋ ವಿಷಯವನ್ನ ಹೀಗೆ ಹೇಳಿ ನಮ್ಮನ್ನ ಹದ್ದುಬಸ್ತಿ ನಲ್ಲಿ ಇಡ್ತಾ ಇದ್ದರು. ಈಗ technology ಮುಂದುವರೆದು ಎಲ್ಲ ವಿಷಯಗಳನ್ನ ತಿರುಗ ಮುರುಗ ಮಾಡುವ ಹಂತಕ್ಕೆ ಬಂದಿದ್ದೇವೆ.
      ಬೇಸಿಗೆಯಲ್ಲಿ ನಮಗೆಲ್ಲ ಮನೆ ಚಾವಣಿ ಮೇಲೆ ಮಲಗೋ ಆಸೆ. ಹಾಗೆ ಒಂದೆರಡು ಬಾರಿ ಮಲಗಿ ಚಳಿಗೆ ಒದ್ದಾಡಿ ಮತ್ತೆ ಬೆಳಗಿನ ಜಾವ ಮನೆಯೊಳಗೇ ಮಲಗಿದ್ದು ಆಗಿದೆ. ಹಾಗೆ ಮೇಲೆ ಮಲಗಿದ್ದಾಗ ಮೇಲೆ ಕಪ್ಪು ಆಕಾಶ ಥರ ಥರ ಬೆಳಕು ಬೀರುವ ಚಿಕ್ಕ ದೊಡ್ಡ ನಕ್ಷತ್ರಗಳು, ಪಕ್ಕದಲ್ಲಿ ಮಲಗಿದ್ದವನಿಗೆ ಕೇಳಿದರೆ ಅದು ನಮ್ಮ ತಾತ , ಅದು ನಮ್ಮಜ್ಜಿ. ನಿಮ್ಮ ಅಜ್ಜಿ ಎಲ್ಲೋ ? ಎಂದು ಕೇಳಿದಾಗ 'ಅಗೋ ಅಲ್ಲಿ' ಅಂತ ಯಾವದನ್ನೋ ತೋರಿಸುತ್ತಿದ್ದ ಮತ್ತೊಬ್ಬ ಗೆಳೆಯ. ಸುಮ್ಮನೆ ಮಲಕೊಳ್ಳಿ ಅನ್ನು ಚಿಕಪ್ಪ, ಮಾವಂದಿರು. 'ಮಾವ .. ಚಂದ್ರ ಯಾಕೆ ನಮ್ಮ ಮೇಲೆ ಬೀಳೋಲ್ಲ' ಅಂತ ಕೇಳುವ ಪಕ್ಕದ ಮನೆಯ ಪುಟ್ಟ ಹುಡುಗ.. ಏನೋ ಹಾರಿಕೆಯ ಉತ್ತರ ಕೊಟ್ಟು 'ಮಲಕ್ಕೋ ಇಲ್ಲಾಂದ್ರೆ ಕಳ್ಳ ಬರ್ತಾನೆ..' ಎಂದು ಹೆದರಿಸುವ ಮಾವ.

      ಹೀಗೆ ಒಮ್ಮೆ ನಾನು 2 ನೆ ತರಗತಿಯಲ್ಲಿರಬೇಕಾದರೆ ಚಂದ್ರ ಗ್ರಹಣ ನೋಡುವ ಸಂದರ್ಭ ಬಂದಿತ್ತು. ನೋಡಿದಾಗ ನಾನಂತೂ ಹೆದರಿದ್ದೆ. ಅದೇ ಮೊದಲ ಬಾರಿ ಪೂರ್ಣ ಚಂದ್ರಗ್ರಹಣ ನೋಡಿದ್ದು. ತಾಮ್ರದ ತಟ್ಟೆಯಂತೆ ಹೊಳೆವ ಚಂದ್ರ ಅದರ ಸುತ್ತ ಹೆಚ್ಚಾಗಿ ಹೊಳೆವ ನಕ್ಷತ್ರಗಳು. ಆಗ ಈ ವಿಸ್ಮಯ ನೋಡಿ ಭಯಪಟ್ಟಿದ್ದೆ. ಆದ್ರೆ ಇಲ್ಲಿಯವರೆಗೂ ಪೂರ್ಣ ಚಂದ್ರ ಗ್ರಹಣ ನೋಡುವ ಅವಕಾಶ ಬರಲೇ ಇಲ್ಲ. ಅದಕ್ಕೆ ಅಂದಿದ್ದು "ಈಗೀಗ ರಾತ್ರಿವೇಳೆ ಆಕಾಶ ನೋಡುವರಾರು? ಅಷ್ಟೊಂದು ಬ್ಯುಸಿ ನಾವು..!! " ಎಲ್ಲವನ್ನು ಇಂಟರ್ನೆಟ್ ನಲ್ಲಿ ಹುಡುಕುವ ತಡಕಾಡುವ ತವಕ.
      ಹಾ! ಒಮ್ಮೆ ಯಾವ ವರ್ಷ ಅಂತ ತಿಳಿದಿಲ್ಲ ನಮ್ಮ ಭೂಮಿಯ ಆಸುಪಾಸಿನ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಅದನ್ನ ನೋಡಲು ಮಧ್ಯ ರಾತ್ರಿ ನಾವೆಲ್ಲ ಎದ್ದು ನೋಡಿದ್ದೆವು. ಅಬ್ಬ ! ಎಷ್ಟೊಂದು ವಿಚಿತ್ರ ರಾತ್ರಿಯ ಆಕಾಶ...ಆ ನೆನಪುಗಳು.
      ಒಮ್ಮೆ ಹ್ಯಾಲೆ ಧೂಮಕೇತು ನಮ್ಮ ಭೂಮಿಯ ಸಮೀಪ ಬಂದಿತ್ತಂತೆ. ಸುಮಾರು ಬೆಳಗಿನ ಜಾವ 3 ಕ್ಕೆ ನಮ್ಮ ಮನೆಯವರೆಲ್ಲ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಅದನ್ನ ಅಮ್ಮ ಹೇಳ್ತಾ ಇದ್ದರು.
      ಇನ್ನು ರಾತ್ರಿ ವೇಳೆ ಮಹಡಿಯ ಮೇಲೆ ಮಲಗಿರುವಾಗ ನೋಡುವ ಆಕಾಶದಲ್ಲಿ ತೇಲುವ ಮೋಡಗಳೋ ಅದೆಷ್ಟು ವಿಚಿತ್ರ ವಿಸ್ಮಯ ಆಕಾರಗಳನ್ನ ಪಡೆಯುತ್ತೆ. ಒಮ್ಮೆ ಮನುಷ್ಯ, ಪ್ರಾಣಿ, ಏನೇನೋ ಆಕಾರಗಳು ಒಮ್ಮೆ ಬೆಚ್ಚಿ ಬೀಳಿಸುವ ಮಳೆ ಮೋಡಗಳು.. ಆ ಅನುಭವ ಮತ್ತೆ ಸವಿಯಲು ಸಾಧ್ಯವೇ ? ಅನಿಸುತ್ತೆ.
      =====================
      ಮುಂಜಾವು ಆಗುತ್ತಿದ್ದಂತೆ ಮೊದಲ ದಿನಗಳಲ್ಲಿ ತಮ್ಮಿಷ್ಟ ದೇವರಿಗೆ, ಇಷ್ಟವಾದವರನ್ನು ನೆನಸಿಕೊಂಡು, ಎರಡೂ ಕೈಗಳನ್ನು ನೋಡಿಕೊಂಡು ಇಂದಿನ ದಿನ ಶುಭವಾಗಲಿ.. ನನ್ನಿಂದ ಏನಾದ್ರೂ ಒಳ್ಳೆಯ ಕೆಲಸವಾಗಲಿ ಎಂದು ತಮ್ಮ ದಿನ ನಿತ್ಯ ಕಾರ್ಯಗಳಿಗೆ ಸಿದ್ಧವಾಗುತ್ತಿದ್ದರು. ತಮ್ಮ ಕಾರ್ಯಗಳಲ್ಲಿಯೂ ಸಹ ಒಳ್ಳೆಯದೇ ಆಗಲಿ ಎನ್ನುವವರೇ ಹೆಚ್ಚಿದರು. 
      ಬೆಳಿಗ್ಗೆ 'ಕುಯಿ ಕುಯಿ' ಅನ್ನೋ ತಮ್ಮ ಮುದ್ದು ಮೊಬೈಲ್ ಫೋನ್ ನ ನೋಡಿ ಏಳುವುದು ಇಂದಿನ ದಿನಚರಿ. (ಅದು ನನ್ನಲ್ಲೂ ಇದೆ). ಇದು ನಮ್ಮ ತಂತ್ರಜ್ಞಾನ ಬದಲಾದಂತೆ ದಿನವೈಖರಿಗಳು ಬದಲಾಗುತ್ತಿವೆ. ಹಾಗಂತ ಎಲ್ಲವನ್ನ ಅಲಕ್ಷ್ಯ ಮಾಡುವುದಕ್ಕೆ ಸಾಧ್ಯವೇ..? 
      ಇಂದಿನ ವಾಹನ ದಟ್ಟಣೆ, ಅತಿ ಜನ ಸಂಖ್ಯೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ  ತಂತ್ರಜ್ಞಾನ, ಬೆಲೆ ಏರಿಕೆ,  ಅದಕ್ಕೆ ಸರಿ ಹೊಂದದ ಆರ್ಥಿಕ ಪರಿಸ್ಥಿತಿ ಇರುವಾಗ ಪ್ರತಿದಿನ ನಾವು ಒಬ್ಬ ಪೋಲಿಸ್ / ಅಧಿಕಾರಿ ವರ್ಗ ತನ್ನ ದಿನಚರಿ ಶುರು ಮಾಡುವುದೇ ಒಂದು Lucky - ಅದೃಷ್ಟ ಜಾಗದಿಂದ ಅಂದರೆ ಅವನ ಮನಸಲ್ಲಿ ಇಂದು ಅಲ್ಲಿಗೆ ಹೋದರೆ ತಾನೆಷ್ಟು ಸರ್ಕಾರಿ ಸಂಬಳ ಅಲ್ಲದೆ ಕಮಾಯಿಸಬಹುದು  ಎಂದು ಅವನು ಹಾಸಿಗೆಯಿಂದ ಏಳುತ್ತಲೇ ಲೆಕ್ಕಾಚಾರ ಹಾಕಿರುತ್ತಾನೆ. 
      ಅಲ್ಲಿರುವ ಟ್ರಾಫಿಕ್ ಕಡಿಮೆ ಮಾಡುವುದನ್ನ ಬಿಟ್ಟು ತನ್ನ ಮೊಬೈಲ್ ನಲ್ಲಿ ಮಾತಾಡಿಕೊಂಡು, ಇಲ್ಲದ ಸಲ್ಲದ ಕೆಟ್ಟ ಬೈಗುಳವನ್ನ ಉಗುಳಿ, ಅಲ್ಲಿ ಇಲ್ಲಿ ಸಿಗುವ ಬಿಟ್ಟಿ ಸಿಗರೆಟ್, ಊಟ, ದಿನ ಪತ್ರಿಕೆ,  ಉಚಿತ ಆಟೋ ರಿಕ್ಷಾ ಪ್ರಯಾಣ, ಹಫ್ತಾ ವಸೂಲ್, ಎಲ್ಲವು ಅವರ ದಿನಚರಿಗಳೇ. 
      ಇನ್ನು ಕೆಲ ಅಧಿಕಾರಿಗಳದ್ದು ಕೆಲಸಕ್ಕೆ ತಕ್ಕಂತೆ ಹಣ. ಇಂತಿಷ್ಟು ಅಂತ ಕೊಟ್ಟರೇ ಆ ಕೆಲಸ ಮಾಡಿ ಮುಗಿಸುವುದು. ಇದು ಇತ್ತೀಚಿಗೆ ಖಾಸಗಿ ಕಂಪನಿಗಳಿಗೂ ಲಗ್ಗೆ ಇಟ್ಟಿದೆ.
      ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


      ಹಿಂದೊಮ್ಮೆ ಎಲ್ಲೋ ಓದಿದ ನೆನಪು. ಆತ ಕಡು ಬಡತನದ ಕುಟುಂಬದಿಂದ ಬಂದವ. ಉತ್ತಮ ವಿದ್ಯಾರ್ಥಿ ಹಾಗೆ ಒಳ್ಳೆ ಅಂಕಗಳನ್ನ ಪಡೆದು ವೈದ್ಯ ವೃತ್ತಿಯಲ್ಲಿ ಸಾಧನೆಗೈದು ವಿದೇಶಕ್ಕೆ ಹಾರಿದವನು ಮತ್ತೆಂದು ತನ್ನ ದೇಶಕ್ಕೆ ಬಾರದೆ ಹೋದನು.

      ಇಲ್ಲಿ ಆತನ ತಂದೆ ತಾಯಿ. ತಂಗಿ ತಮ್ಮ ಹಾಸಲು ಹೊದೆಯಲು ಬಟ್ಟೆಯಿಲ್ಲದೆ ಕೂಲಿ ಮಾಡುವ ಸ್ಥಿತಿ. ಅಲ್ಲಿ ಆತನದು ಐಶಾರಾಮಿ ಜೀವನ.
      ಮತ್ತೊಬ್ಬ ವೈದ್ಯನದೂ (ಮುಕ್ಕಾಲು ಪಾಲು ವೈದ್ಯರದು) ಇದೆ ಕಥೆ. ಬಡವ ಕಷ್ಟ ಪಟ್ಟು ವೈದ್ಯನಾದ. ಈಗ ಪ್ರತಿಷ್ಟಿತ  ಖಾಸಗಿ ಕಂಪನಿ ಯಲ್ಲಿ ವೈದ್ಯ. ಅಲ್ಲಿ ಬರುವ ರೋಗಿಗಳೆಲ್ಲ ತುಂಬಾ ಮೇಲ್ವರ್ಗದ ಜನರು. ಅಲ್ಲಿ ಅವನಿಗೆ ಕೈ ತುಂಬಾ ಸಂಬಳ,
      ಎ ಸಿ ಕೊಠಡಿ, ಕಾರು ಎಲ್ಲ ಸಿಕ್ಕಿತು. ಈಗ ಅದರ ಜಗತ್ತಿನಿಂದ ಆತ ಹೊರಗೆ ಬರಲು ಇಷ್ಟ ಪಡುತ್ತಿಲ್ಲ. ಆದರೆ ಹಳ್ಳಿಗಾಡಿನ ಜನಸೇವೆ ಮಾಡಲು ಇವರಂತಹ ವೈದ್ಯರುಗಳು ಎಷ್ಟು ಇದ್ದರು ಸಾಲದು. ಇಂದಿನ ಆರ್ಥಿಕ ವ್ಯವಸ್ಥೆ ಏರಿಳಿತದಿಂದ ಕಂಗೆಟ್ಟ ಜನರು (ವೈದ್ಯರು ತಮ್ಮ ಸಂಬಳ ಹಾಗು ಫೀ ಅನ್ನು ಏರಿಸಿ ಕೊಂಡಿದ್ದಾರೆ). ಹಳ್ಳಿಗಾಡಿನ ಜನರ ಆರೋಗ್ಯ ಉದ್ದರಿಸಲು ಅವರೆಂದೂ ಕನಸು ಮನಸಲ್ಲೂ ನೆನಸಿರಲಾರರು.
      ಇಂದಿನ ನಗರೀಕರಣದ ಹೊಡೆತ ಅತಿ ಕಡುಬಡತನದಲ್ಲಿರುವ ಪ್ರಜೆಗಳಿಗೆ ಕಾಣಸಿಗುವುದು. ಆ ಬಡತನದ ಬೇಗೆಯಿಂದ ಮೇಲೇಳಲು ಸಾಧ್ಯವೇ ಆಗುತ್ತಿಲ್ಲ. ಆಧುನಿಕತೆಗೆ ಮಾರುಹೋಗಿ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ,  ರಾಜಕೀಯ ವ್ಯವಸ್ಥೆ ಎಲ್ಲವು ಅಂತಹವರನ್ನ ಮರೆತಿದೆ. ಒಂದೆಡೆ ವೈಭವೋಪೇತ ಮಾಲ್ ಗಳಿದ್ದರೆ ಮತ್ತೊಂದು ಕಡೆ ಮಳೆ ಸುರಿಯುತ್ತಿರುವ  ಛಾವಣಿಗಳು, ಕಿಟಕಿ ಬಾಗಿಲುಗಳು ಇಲ್ಲದ ಮನೆಗಳು ಇಂದಿಗೂ ಕಾಣಸಿಗುತ್ತಿವೆ. ಕೆಲವು ಹಳ್ಳಿಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲದೆ ಕೊಳಕು ರಾಜಕೀಯದ ಅವ್ಯವಸ್ಥೆಯಿಂದ ಕಡೆಗಣಿಸಿವೆ.
      ಆ ವೈಭವಕ್ಕೆ ಮಾರುಹೋದ ಹಳ್ಳಿಗಾಡಿನ ಜನರು ತಮ್ಮ ತಮ್ಮ ಜಾನುವಾರು, ಕೃಷಿ ಭೂಮಿ, ಎಲ್ಲವನ್ನು ಮಾರಿಕೊಂಡು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದರಿಂದ ನಿಧಾನಗತಿಯಿಂದ ಬೆಳೆಯುತ್ತಿದ್ದ ನಗರಗಳು ಅತಿವೇಗವಾಗಿ ಸುವ್ಯವಸ್ಥೆ ಇಲ್ಲದೆ ಬೆಳೆಯುತ್ತಿವೆ. ನಮ್ಮ ದೇಶದ ಆಹಾರ ಸಾಮಗ್ರಿಗಳು  ಬೆಳೆಯಲಾಗದೆ ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಲಿದೆ.
      ದಿನೇ ದಿನೇ ಪ್ರಗತಿಯ ಹೆಸರಲ್ಲಿ ಮಾನವತೆಯನ್ನ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಒಂದು ಸಣ್ಣ ಸಮಾಜಸೇವೆ ಮಾಡಲು ಯತ್ನಿಸಿದರೂ ಅಲ್ಲಿ ಒಂದು ಕೊಂಕು ನುಡಿಗಳು, ಅಡೆತಡೆ ಬರುತ್ತಿವೆ. ಇದು ಮೇಲಿನ ಹಂತದಿಂದ ಕೆಳಮಟ್ಟದ ಹಂತದವರೆಗೂ ವಿಸ್ತರಿಸಿದೆ. ಇಲ್ಲಿ ಮೇಲು ಹಂತದ ವರ್ಗಕ್ಕೆ ಮಣೆ. ಆನಂತರ ಇನ್ನಿತರ ವರ್ಗಕ್ಕೆ.
      ===========================


      ಆ ದಿನಗಳನ್ನ ನೆನಪು ಮಾಡಿಕೊಂಡರೆ ಇಂದಿಗೂ ಆ ಬೆಂಕಿ ಬಿಸಿಲು ನನ್ನ ಮೈ ಸುಡುತ್ತೆ.
      ಬೆಂಗಳೂರಿನಿಂದ ಇನ್ನೇನು ಜೋಲಾರ ಪೇಟೆ  ಶುರು ಆಗೋ ಹೊತ್ತಿಗೆ  ಚೆನ್ನೈ ನ ಬಿಸಿಲ ಧಗೆ ಶುರು. ಅಂತು ಟ್ರೈನ್ ನಲ್ಲಿ ಸೀಟ್ ಹಿಡಿದು ಕುಳಿತು ಪ್ರಯಾಣಿಸುವುದೇ ದೊಡ್ಡ ಸಾಹಸ. ಇನ್ನು ಆ ಚೆನ್ನೈ Electric Oven ನೆ ಸರಿ. ಪಯಣ ಬಿಸಿಲ ಅನುಭವ 'ವಾನಂಬಾಡಿ' ಇಂದಲೇ ನಮ್ಮ 'body' ಗೆ ತಾಕುತ್ತೆ. ರೈಲು ಪಯಣ ಒಂದು ವಿಚಿತ್ರಾನುಭವ ತಂದಿತ್ತು ನನಗೆ. ಸಾಕಷ್ಟು ಬಸ್  ನಾಲ್ಲೇ ಪಯಣಿಸಿದ್ದ ನನಗೆ ಟ್ರೈನ್ ಅಂದ್ರೆ ಏನು ಅಂತ ತಿಳಿದ್ದದ್ದು ಚೆನ್ನೈಗೆ ಹೋದಾಗಲೇ. 
      ಸೀಟ್ ಬುಕ್ ಮಾಡಿ , ಸೀಟ್ ಹಿಡಿಯುವುದರಿಂದ ಶುರುವಾಗಿ ಸ್ಟೇಷನ್ ನಲ್ಲಿ ಇಳಿಯುವವರೆಗೂ ವಿಚಿತ್ರ ವಿನೋದದ ಅನುಭವ. ಅಲ್ಲಿ ಬರುವ ಜನಗಳು, ಮಕ್ಕಳು, ಜೊತೆ ಸುಡು ಕಾಫ್ಫಿ , ಚಾಯ್, ಸುಡು ದೋಸೈ ಅನ್ನುತ್ತ ಮಾರುವ ಕ್ಯಾಂಟೀನ್ ಹುಡುಗರು, ಪತ್ತು ರೂಪಾಯಿಗೆ ಎರಡು ಅನ್ನುತ್ತ ತರುವ ಮಕ್ಕಳ ಗೊಂಬೆಗಳು, ಅಲ್ಲಿಯೇ ಬರುವ ಅಂಬುರು ಮಲ್ಲಿಗೆ ಮಹಿಳೆಯರು. ಕಿಟಕಿ ಪಕ್ಕದಲ್ಲಿ 'Cold ತಣ್ಣಿ' ಎಂದು  ಕೂಗುವವರು. ಬೇಕು ಅಂತಲೇ ಮೈ ತಾಕಿಸಿ ನಿಲ್ಲುವ ಜನಗಳು. ಅದರಿಂದಲೇ ಖುಷಿ ಪಡುವ ಮತ್ತೊಂದು ವರ್ಗದವರು. ಜಗಳ, ಮಕ್ಕಳ ಅಳು, ಕನ್ನಡ ಗೊತ್ತಿದ್ದೂ 'ಏನ್ ಮಚ್ಚ!!! ಎಂಗೆ ಪೋರೆ' ಎನ್ನುವ ಬೆಂಗಳೂರು ಕನ್ನಡಿಗರು(?)... ಚೆನ್ನೈ ಸ್ಟೇಷನ್ ಇಳಿಯುವವರೆಗೂ ಯಾವುದೊ ಲೋಕದಲ್ಲಿ ಇದ್ದ ಅನುಭವ.










      ========================================

      ಸವಿ ಸವಿ ನೆನಪು ಸಾವಿರ ನೆನಪು ...
      ಇಂದಿಗಿಂತ ಅಂದೇನೆ ಚೆಂದವೋ...
      ಅನ್ನೋ ಹಾಡುಗಳು ಕೇಳುವಾಗ ಇಂದಿನಷ್ಟು ಅಂದು ಬದುಕಿನ ಜಂಜಾಟ, ಅವಸರ, ಆತುರ ಕಾತುರ ಇರಲಿಲ್ಲ. ನಿಧಾನ ಗತಿಯ ಒಳ್ಳೆ black & white ಚಿತ್ರಗಳಂತೆ ಇರುತ್ತಿತ್ತು. ಸುಮಾರು 13 ವರ್ಷಗಳು ಕಳೆದಿವೆ ನಾನು ಇಂಟರ್ನೆಟ್ ಜಗತ್ತಿಗೆ ಕಾಲಿಟ್ಟು. ಅಂದಿನಿಂದ ಇಂದಿನವರೆಗೂ ಹಲವು ಬದಲಾವಣೆಗಳು ಶೀಘ್ರಗತಿಯಲ್ಲಿ ಕಂಡಿದ್ದೇನೆ.
      ನೆನಪಿರಬಹುದು ಅಂದಿನ ಆ ರೇಡಿಯೋ ಜಮಾನ....
      'ಇದು ಆಕಾಶವಾಣಿ, ಬೆಂಗಳೂರು' ಎಂದು ಮಧುರವಾಗಿ ಉಳಿಯುವ ಧ್ವನಿ ಕೇಳಿದಾಗ ಆ ದೊಡ್ಡದಾದ ಡಬ್ಬದಂತೆ ರೇಡಿಯೋ ಮುಂದೆಯೇ ಅಡ್ಡಾಡುತ್ತಲೇ ಯಾವಾಗ ಚಲನಚಿತ್ರ ಗೀತೆಗಳು ಬರುತ್ತವೆಯೋ ಏನೋ ಎಂದು ಕಾತುರ.
      ಹಿಂದಿನ ದಿನಗಳಲ್ಲಿ ನೋಡಿದ ಹೊಸ ಚಲನ ಚಿತ್ರ ಹಾಡು ಕೇಳುವಾಗ ರೇಡಿಯೋ ಧ್ವನಿ ಏರಿಸಿ ಓಣಿಯ ಸುತ್ತ ಮುತ್ತ ಜನರೆಲ್ಲಾ ಕೇಳುವಂತೆ ಮಾಡುವುದು. ವಿಶೇಷ ವಾರ್ತೆ ವಿಷಯಗಳು ಕೇಳುವಾಗ ಕಿವಿನಿಮಿರಿಸಿ ಕೇಳುತ್ತ ... ಅದರ ತರಂಗಾಂತರ ಕೆಟ್ಟು ಹೋದಾಗ ಕಂಗೆಡುವುದು. ಪಕ್ಕದಲ್ಲಿ ಯಾರೋ ಪಾಕೆಟ್ ರೇಡಿಯೋ ಕೇಳುವುದನ್ನ ನೋಡಿ ಬೇಜಾರು ಮಾಡಿಕೊಂಡು ರೇಡಿಯೋ ದ antenna ವನ್ನ ತಿರುಗಿಸಿ ಅಲ್ಲಾಡಿಸಿ ಸರಿಯಾಗಿ ಕೇಳುವ ಹೊತ್ತಿಗೆ ಅ ಕಾರ್ಯಕ್ರಮ ನಿಂತು ಹೋಗಿರುತಿತ್ತು.

      'ಕಾಯೋ ತಂದೆಯೇ.. ದೇವ ಕರುಣಿಸೋ' ಎನ್ನುವಾಗ ಇದ್ದ ಭಕ್ತಿ ಭಾವದ ಮನಸು.
      'ಗುಲಾಬಿ ಓ ಗುಲಾಬಿ..' ಎನ್ನುವಾಗ ಪ್ರೀತಿಯ ಅರಸುವ ಮನಸು.
      ಇಂದಿನ FM Radio ಯುಗದ "ಹಳೆ ಪಾತ್ರೆ, ಹಳೆ ಕಬ್ಬಿಣ", "ಬೋರ್ಡ್ ಇರದ ಬಸ್ಸನು ಏರಿ ಬಂದ ಚೋಕರಿ" ಅನ್ನೋ ಫಾಸ್ಟ್ ಟ್ರಾಕ್ ಗೀತೆಗಳು, "ಇನ್ನು 1 hour ನನ್ನ ಜೊತೆ ಮಜಾ ಮಾಡಬಹುದು............... ಮುಂದಿನ songs ಜೊತೆ" ಅನ್ನೋ, ಅರ್ಥವಿರದ ಪ್ರಶ್ನೆಗಳ್ಳನ್ನ ಕೇಳಿ, ವಿಚಿತ್ರ ಉತ್ತರಗಳನ್ನ ಕೇಳಿ ಶೋತ್ರುಗಳನ್ನ ಆನಂದ ಪಡಿಸೋ, ಇನ್ನು "ಯಾರ ಬಳಿಯೂ ಹೇಳಿಕೊಳ್ಳದ ಮನಸ್ಸಿನ ಭಾವನೆಗಳನ್ನ ( ಸುಪ್ತ ಕಾಮನೆಗಳನ್ನ)" ಕೆದಕಿ ಕಾಡೋ ಇಂದಿನ ಯುಗದ
      FM RJ ಗಳ ಭಾಷ ವೈಖರಿ ಕೇಳಿದರೆ ಅವರೇನು ಶಾಲೆಗೇ ಹೋಗಿ ಕನ್ನಡ ಕಲಿತ್ತಿದ್ದಾರ ? ಅನ್ನೋ ಶಂಕೆ ಕಾಡದೆ ಇರದು.
      ಇದೆಲ್ಲ ಯಾಕೆ ಅಂದರೆ ನಾವು ಶಾಲೆಗೇ ಹೋಗುವ ಕಾಲ ರೇಡಿಯೋ ಜಮಾನ. ಏನೇ ವಿಷಯಗಳು ಬೇಕಿದ್ದರೂ ರೇಡಿಯೋ ಇಲ್ಲ ವೃತ್ತ ಪತ್ರಿಕೆಗಳು ಇರುತ್ತಿದ್ದವು. ಅಂದಿನ ಶಾಲೆ ಅಂದರೆ ಇಂದಿನಂತೆ ಡೊನೇಶನ್ ಕೀಳುವ ಸಂಸ್ಥೆಗಳಲ್ಲ ಉತ್ತಮ ವಿದ್ಯಾ ಪೀಠಿಕೆ, ಶಿಸ್ತು, ಕಲಿಕೆ ಹಾಕಿ ಕೊಡುತಿದ್ದ ವಿದ್ಯಾ ಕೇಂದ್ರಗಳು.
      ಅಂದಿನ ದಿನಗಳಲ್ಲಿ  ಕಲಿಯುತ್ತಿದ್ದ ಪಾಠ, ಇತರ ಚಟುವಟಿಕೆಗಳು ಎಲ್ಲ ಕೃತಿಯಲ್ಲೇ. ಇಂದಿನಂತೆ ಕಂಪ್ಯೂಟರ್, downloads, pendrives, CD, ಅದೂ, ಇದೂ ಅಂತ ಇರಲೇ ಇಲ್ಲವಲ್ಲ. ಬರಿ ಮತ್ತೆ ಕಲಿ.
      ಹಾ ! ನೆನಪಿದೆ ಸರಿಯಾಗಿ ಗುಂಡಗೆ ಬರೆಯುವುದಕ್ಕೆ 5 ಅಂಕಗಳು ಪ್ರತ್ಯೇಕ ಎಂಬ ವಿಶೇಷ ಸೂಚನೆ.
      ಒಬ್ಬ ಗೆಳೆಯ ಇದ್ದ "ಪ್ರಭಾಕರ" ಅವನ ಅಕ್ಷರಗಳು ತುಂಬಾ ಗುಂಡಗೆ ಸ್ಪಷ್ಟ ವಾಗಿರುತ್ತಿದ್ದವು. ಅವನ ಅಕ್ಷರಗಳನ್ನ ನೋಡಿ ನಾನು ಅದೇ ರೀತಿ ಪ್ರಯತ್ನ ಪಟ್ಟು ಉತ್ತೀರ್ಣನಾದೆ.
      ಆ ಪ್ರೈಮರಿ ಸ್ಕೂಲ್ ಮನೆಯ ಹತ್ತಿರ ಇತ್ತು. ಅಲ್ಲಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳೆಲ್ಲ ನಮ್ಮ ಆಸು ಪಾಸಿನ ಬೀದಿಯ, ಹುಡುಗರೇ ಆಗಿರುತ್ತಿದ್ದರು. ಈಗಿನಂತೆ ದೂರದ ಶಾಲೆಗಳಿಗೆ ಹೋಗಿ ಬರುವ ಪ್ರಮೇಯ ಇರುತ್ತಿರಲಿಲ್ಲ.
      =====
      ಆಹಾ..! ರಾತ್ರಿ ಮಲಗುವ ಮುನ್ನ ಮೊದಲೆಲ್ಲ ಕಥೆ ಕೇಳುವ ಅಭ್ಯಾಸ.
      ಅಜ್ಜಿ, ಅಮ್ಮ, ಅತ್ತೆ, ಅಕ್ಕ, ಮಾವ, ದೊಡ್ಡಪ್ಪ ಇವರೆಲ್ಲರ ಕಥೆಗಳೇ ಒಂಥರಾ ರೋಚಕ ಅನುಭವದ ಕಥೆಗಳು (ಕೆಲವು ಕಥೆ ಸುಳ್ಳೋ ನಿಜವೋ ಇದುವರೆಗೂ ತಿಳಿದಿಲ್ಲ ).

      ತಂದೆ ಹೇಳಿದ ಕಥೆಯಿದು. ಇದನ್ನ ಅವರ ತಂದೆ ಹೇಳ್ತಾ ಇದ್ದರಂತೆ.
      ' ನಮ್ಮ ತಾತ (ತಂದೆಯ ತಂದೆ) ಮತ್ತೆ ಮುತ್ತಾತ ಮೊದಲು ಇದ್ದದ್ದು ಬೆಂಗಳೂರು ಸಮೀಪದ ಕೇತಮಾರನಹಳ್ಳಿ ಹತ್ತಿರ ಆಗೆಲ್ಲ ತುಂಬಾ ಕಾಡು. ಕುರುಚಲು ಗುಡ್ಡ ಮೇಡು. ಅಲ್ಲಿ ಸುಮಾರು ಹತ್ತಿಪ್ಪತ್ತು ಮನೆಗಳಿದ್ದವಂತೆ. ಒಮ್ಮೆ ದೂರದ ಊರಿಗೆ ಇಬ್ಬರು ಬರುವಾಗ ಯಶವಂತಪುರ(ಹಳೆಯ ಹೆಸರು - ತುರುಕರ ಪಾಳ್ಯ) ದಾಟಿ ಅಲ್ಲಿ ಬಾಡು ಅಂದರೆ ಮಾಂಸವನ್ನ
      ಮನೆಯ ಅಡುಗೆಗಾಗಿ ತರುವಾಗ ರಾತ್ರಿ ಸುಮಾರು 10 ಗಂಟೆ ಆಗಿತ್ತಂತೆ. ಇನ್ನೇನು ಈಗಿನ ಮಹಾಲಕ್ಷ್ಮಿ ಪುರದ ಗುಡ್ಡ ಹತ್ತಿ ಇಳಿವಾಗ ಹಿಂದಿನಿಂದ ಯಾರೋ ತಮ್ಮ ಮಾಂಸದ ಚೀಲವನ್ನ ಎಳೆದಂತಾಗಿ ಮುತ್ತಾತ '" ಲೇ, ಮಗನೆ ಈ ದೆವ್ವ ಮತ್ತೆ ಬಂದು ಕೆಳ್ತಾವ್ನೆ, ಬಿಸಾಕು ಒಂದೆರಡು ಚೂರು. ಹಾಳಾಗಿ ಹೋಗ್ಲಿ" ಎಂದರಂತೆ. ಅಂತೆಯೇ ತಾತ ಒಂದೆರಡು ಮಾಂಸ ಎಸೆದು ಮನೆಯ ಹಾದಿ ಹಿಡಿದರಂತೆ. ಮನೆಯಲ್ಲಿ ಅಜ್ಜಿ ಆಗ ಇವರಿಗಾಗಿ ಕಾಯುತ್ತ ಅಡುಗೆಗೆ ಸಿದ್ಧತೆ ಮಾಡುತ್ತಿದ್ದರಂತೆ.
      ಆಗೆಲ್ಲ ವಿದ್ಯುತ್ ಎಲ್ಲಿ ಬರಬೇಕು. ಹೊಂಗೆ ಎಣ್ಣೆ ಮಿಣುಕು ದೀಪದ ಬೆಳಕಿನಲ್ಲಿ ಮನೆ ಬೆಳಗಬೇಕಾಗಿತ್ತು. ಹೀಗೊಮ್ಮೆ ಅದೇ ರೀತಿಯ ಬಾಡೂಟ ಸಿದ್ದತೆ ಮಾಡುವಾಗ, ತಾತನಿಗೆ ಕಳ್ಳು ಕುಡಿಯುವ ಹವ್ಯಾಸ. ಈಗಿನ ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿ ಒಂದು ಕಳು ಮಾರಾಟ ಅಂಗಡಿ ಇತ್ತಂತೆ. ಅಲ್ಲಿಂದ ತಂದು ಮನೆಯ ಬಾಗಿಲ್ಲಲ್ಲಿ ಕುಳಿತು ಯಾವುದೋ ನಾಟಕದ ಹಾಡನ್ನು ಹೇಳುವಾಗ ಅಲ್ಲಿ ಬಾಗಿಲ ಮುಂದೆ ಎರಡು ಕಾಲಿನ ವಿಚಿತ್ರ ಪ್ರಾಣಿಯೊಂದು ನೃತ್ಯ ಮಾಡುತ್ತಿತ್ತಂತೆ. ಅದನ್ನು ಕಂಡ ತಾತ " ಬಂದೆನೋ ಮಗನೆ, ನಿಂಗೆ ಇವತ್ತು ಬೇಕಾ. ಕುಣಿ ಕೊಡ್ತೀನಿ" ಅಂತ ಹೇಳಿ ಯಾವುದೊ ಡಬ್ಬ ಹಿಡಿದು ಹಾಡುವಾಗ ಆ ಪ್ರಾಣಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತಂತೆ. ಇದರ ಕಾಟ ತಡೆಯಲಾರದೆ ಒಳಗೆ ಕುಳಿತ್ತಿದ್ದ ಅಜ್ಜಿಗೇ "ಲೇ, ಅಕ್ಕಮ್ಮ ಇದು ಬಂದೈತೆ, ಒಂದೆರಡು ಹಾಕು ಇತ್ತ.. ಹೋಗ್ಲಿ" ಅಂದರಂತೆ. ಮುತ್ತಜ್ಜಿ ತಂದು ಬಿಸಾಕುತ್ತಿದ್ದರಂತೆ. ಆ ಪ್ರಾಣಿ ಅದನ್ನ ತಿಂದು ಕೇಕೆ ಹಾಕುತ್ತ ಹೋಗುತ್ತಿತ್ತಂತೆ.

      ಇದನ್ನೆಲ್ಲಾ ಕೇಳುವಾಗ ನಮ್ಮ ದೇಹವೆಲ್ಲ ಬೆವರುತ್ತಿತ್ತು. ಉಚ್ಚೆ ಉಯ್ಯದು ಕೊಳ್ಳೋದು ಬಾಕಿ. ರಾತ್ರಿ ಬಾಗಿಲು, ಕಿಟಕಿ ಸಂದು ನೋಡಲು ಭಯವಾಗಿ ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನ ಗಟ್ಟಿಯಾಗಿ ಹಿಡಿದುಕೊಂಡು ಮಲಗುತ್ತಿದ್ದೆ.
      ಹೀಗೆ ಹಲವು ಬೆಂಕಿದೆವ್ವ, ಗಾಳಿ ದೆವ್ವ , ನಾಳೆ ಬಾ ಅನ್ನೋ ಕೂಗುಮಾರಿ, ಕೊಳ್ಳಿದೆವ್ವಗಳ ಕಥೆ ಕೇಳುತ್ತ ರಾತ್ರಿ ಕಳೆಯುತ್ತಿದೆವು.